ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿಪ್ರೇಮಿಗಳು ಮೆಚ್ಚಿದ ‘777 ಚಾರ್ಲಿ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಗಳ ರೂಪದಲ್ಲಿ ದೊಡ್ಡ ಗೌರವ ಸಂದಿದೆ. 2021ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು 2025ರಲ್ಲಿ ಪ್ರಕಟಿಸಲಾಗಿದ್ದು,‘777 ಚಾರ್ಲಿ’ ಚಿತ್ರಕ್ಕೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಗೌರವ ದೊರೆತಿದೆ.
‘777 ಚಾರ್ಲಿ’ ಚಿತ್ರವು ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ಸಂಕಲನ (ಪ್ರತೀಕ್ ಶೆಟ್ಟಿ), ಅತ್ಯುತ್ತಮ ಗೀತರಚನೆ (ನಾಗಾರ್ಜುನ) ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ. ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿರುವುದು ಚಿತ್ರದ ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮ ತಂದಿದೆ.
ರಾಜ್ಯ ಪ್ರಶಸ್ತಿ ಪ್ರಕಟವಾದ ನಂತರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ, “ನಮ್ಮ ‘777 ಚಾರ್ಲಿ’ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಸಿಕ್ಕಿವೆ. 2ನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಗೀತರಚನೆ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಆಯ್ಕೆ ಮಾಡಿದ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿರ್ದೇಶಕ ಕಿರಣ್ ರಾಜ್ ಅವರ ವಿಷನ್, ಪ್ರತೀಕ್ ಅವರ ಸಂಕಲನ ಹಾಗೂ ನಾಗಾರ್ಜುನ ಶರ್ಮಾ ಅವರ ಹೃದಯ ಮುಟ್ಟುವ ಪದಗಳು ಈ ಯಶಸ್ಸಿಗೆ ಕಾರಣವಾಗಿವೆ. ನಮ್ಮ ತಂಡಕ್ಕೂ, ಪ್ರೇಕ್ಷಕರಿಗೂ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.