January16, 2026
Friday, January 16, 2026
spot_img

ದಕ್ಷಿಣ ಆಫ್ರಿಕಾ ಸರಣಿಗೆ 8 ಸ್ಟಾರ್ ಆಟಗಾರರು ಅಲಭ್ಯ: ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಹುನಿರೀಕ್ಷಿತ ಮೂರು ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಆರಂಭವಾಗಲಿದೆ. ಆದರೆ, ಈ ಸರಣಿಗೆ ಟೀಮ್ ಇಂಡಿಯಾದ ಎಂಟು ಪ್ರಮುಖ ಆಟಗಾರರು ಅಲಭ್ಯರಾಗಿರುವುದು ತಂಡದಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿದೆ. ಗಾಯದ ಸಮಸ್ಯೆ, ಮುಂಬರುವ ಟಿ20 ವಿಶ್ವಕಪ್​ ದೃಷ್ಟಿಯಿಂದ ಪ್ರಮುಖರಿಗೆ ವಿಶ್ರಾಂತಿ ಮತ್ತು ಫಾರ್ಮ್ ಕೊರತೆಯಿಂದ ಈ ಆಟಗಾರರನ್ನು ಕೈಬಿಡಲಾಗಿದೆ.

ಈ ಬೃಹತ್ ಕ್ರಿಕೆಟ್ ಕದನಕ್ಕೆ ಅಲಭ್ಯರಾಗಿರುವ ಸ್ಟಾರ್ ಆಟಗಾರರು ಮತ್ತು ಅವರ ಅಲಭ್ಯತೆಗೆ ಕಾರಣಗಳು ಇಲ್ಲಿವೆ:

ಶುಭ್​ಮನ್ ಗಿಲ್ (ನಾಯಕ): ಭಾರತ ಏಕದಿನ ತಂಡದ ನಾಯಕರಾಗಿರುವ ಶುಭ್​​​ಮನ್ ಗಿಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆ ನೋವಿನ ಸಮಸ್ಯೆಗೆ ಒಳಗಾಗಿದ್ದರು. ವೈದ್ಯರ ಸಲಹೆಯಂತೆ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಶ್ರೇಯಸ್ ಅಯ್ಯರ್ (ಉಪನಾಯಕ): ಉಪನಾಯಕ ಶ್ರೇಯಸ್ ಅಯ್ಯರ್ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದರು. ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅವರನ್ನು ಈ ಸರಣಿಗೆ ಪರಿಗಣಿಸಲಾಗಿಲ್ಲ.

ಹಾರ್ದಿಕ್ ಪಾಂಡ್ಯ (ಆಲ್-ರೌಂಡರ್): ತಂಡದ ಪ್ರಮುಖ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಫಿಟ್​​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಅವರು ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ಜಸ್​​​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ (ವೇಗಿಗಳು): ಮುಂಬರುವ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್​​ಪ್ರೀತ್ ಬುಮ್ರಾ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಚಾಂಪಿಯನ್ಸ್ ಟ್ರೋಫಿ ಬಳಿಕ ವಿಶ್ರಾಂತಿ ನೀಡುವ ಉದ್ದೇಶದಿಂದ ಈ ಸರಣಿಯಿಂದ ಕೈಬಿಡಲಾಗಿದೆ.

ಮೊಹಮ್ಮದ್ ಸಿರಾಜ್ (ವೇಗಿ): ಟೆಸ್ಟ್ ತಂಡದ ಖಾಯಂ ಸದಸ್ಯರಾದ ಮೊಹಮ್ಮದ್ ಸಿರಾಜ್ ಅವರಿಗೆ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಅಕ್ಷರ್ ಪಟೇಲ್ (ಸ್ಪಿನ್ ಆಲ್-ರೌಂಡರ್): ಆಸ್ಟ್ರೇಲಿಯಾ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಸ್ಪಿನ್ ಆಲ್​​ರೌಂಡರ್ ಅಕ್ಷರ್ ಪಟೇಲ್ ಅವರನ್ನು ಸರಣಿಯಿಂದ ಕೈಬಿಡಲಾಗಿದೆ.

ವರುಣ್ ಚಕ್ರವರ್ತಿ (ಸ್ಪಿನ್ನರ್): ಚಾಂಪಿಯನ್ಸ್ ಟ್ರೋಫಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರುಣ್ ಚಕ್ರವರ್ತಿ ಅವರಿಗೆ ಏಕದಿನ ಸರಣಿಯಲ್ಲಿ ಅವಕಾಶ ನೀಡಿಲ್ಲ. ಆದರೆ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಏಕದಿನ ತಂಡ:

ಈ ಸ್ಟಾರ್ ಆಟಗಾರರ ಅಲಭ್ಯತೆಯ ನಡುವೆಯೂ, ಭಾರತ ತಂಡವು ಬಲಿಷ್ಠ ಆಟಗಾರರೊಂದಿಗೆ ಸರಣಿಗೆ ಸಜ್ಜಾಗಿದೆ. ಕೆಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

Must Read

error: Content is protected !!