ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಜಿಎಸ್ಟಿ ದರವನ್ನು ಕಡಿತಗೊಳಿಸಿದೆ. ಕಾಂಗ್ರೆಸ್ ಸರ್ಕಾರವನ್ನು ಜನ ನಂಬಬಹುದು. ಇದು ಪ್ರತಿಯೊಬ್ಬ ಭಾರತೀಯನಿಗೆ ಆಶಾಕಿರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಸರ್ಕಾರದ ತೆರಿಗೆ ನೀತಿಗಳು “ಜನ ವಿರೋಧಿ”ಯಾಗಿದೆ. ಬಿಜೆಪಿಯ ಆಡಳಿತದಲ್ಲಿ ಸಾಮಾನ್ಯ ಭಾರತೀಯರು ನಲುಗಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ನಿರುದ್ಯೋಗ ನಮ್ಮ ಯುವಕರ ಬೆನ್ನೆಲುಬನ್ನು ಮುರಿದಿದೆ, ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿಯವರ ಸರ್ಕಾರದಿಂದ, ಭಾರತದಲ್ಲಿ ಬಿಲಿಯನೇರ್ಗಳು ಪ್ರಗತಿ ಹೊಂದುತ್ತಿದ್ದು, ಬಡವರು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ದೇಶವನ್ನಾಗಿ ಮಾಡಿದೆ. ಆದರೆ, ಈ ಕತ್ತಲಿನಲ್ಲಿ ಕಾಂಗ್ರೆಸ್ ಆಶಾಕಿರಣವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್ಟಿ ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು. ಅಂತಹ ತಿದ್ದುಪಡಿಯಿಂದ ಸುಮಾರು ಶೇ.70ರಷ್ಟು ಆದಾಯ ನಷ್ಟವು ತಮ್ಮ ಹೆಗಲ ಮೇಲೆ ಬೀಳುತ್ತದೆ ಎಂಬುದು ತಿಳಿದಿದ್ದರೂ, ನಾವು ಸ್ಥಿರವಾಗಿ ನಿಂತೆವು ಎಂದು ತಿಳಿಸಿದರು.
ನಮ್ಮ ಒತ್ತಾಯದಿಂದ್ಲೇ ಕೇಂದ್ರ ಜಿಎಸ್ಟಿ ದರ ಇಳಿಸಿದ್ದು: ಸಿಎಂ ಸಿದ್ದು
