Saturday, September 27, 2025

ದುಬೈಯಲ್ಲಿ ಬ್ಲೂ ಬಾಯ್ಸ್ ಅಬ್ಬರ: ಶ್ರೀಲಂಕಾ ಗೆಲುವಿಗೆ ಬಿಗ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದೆ.ಶ್ರೀಲಂಕಾಗೆ ಗೆಲ್ಲಲು 203 ರನ್ ಗಳ ಬೃಹತ್ ಗುರಿ ನೀಡಿದೆ.

ಟೂರ್ನಿಯಲ್ಲಿ ಅಮೋಘ ಫಾರ್ಮ್​ನಲ್ಲಿರುವ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರೆ, ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಕೊನೆಯ ಓವರ್​ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ಓವರ್​ನಲ್ಲೇ ಶುಭ್​ಮನ್ ಗಿಲ್ (4) ವಿಕೆಟ್ ಕಳೆದುಕೊಂಡಿತು. ನಂತರ 2ನೇ ವಿಕೆಟ್​​ಗೆ ಒಂದಾದ ಅಭಿಷೇಕ್ ಹಾಗೂ ನಾಯಕ ಸೂರ್ಯಕುಮಾರ್ 33 ಎಸೆತಗಳಲ್ಲಿ 59 ರನ್​ಗಳ ಜೊತೆಯಾಟ ನೀಡಿದರು. ಇದರಲ್ಲಿ ನಾಯಕ ಸೂರ್ಯಕುಮಾರ್ ಪಾತ್ರ ಕೇವಲ 12 ರನ್. ಸೂರ್ಯ ಬೆನ್ನಲ್ಲೆ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ಗಳ ಸಹಿತ 61 ರನ್​ಗಳಿಸಿದ್ದ ಅಭಿಷೇಕ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು.

4ನೇ ವಿಕೆಟ್​ಗೆ ಒಂದಾದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಭಾರತವನ್ನ ದಿಢೀರ್ ಕುಸಿತದಿಂದ ಪಾರು ಮಾಡಿ ಸ್ಕೋರ್ ಗತಿಯನ್ನು ಹೆಚ್ಚಿಸಿದರು. ಸಂಜು ಸ್ಯಾಮ್ಸನ್ 39 ರನ್​ಗಳಿಸಿದರೆ, ತಿಲಕ್ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 49 ರನ್​ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 21 ರನ್​ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಲು ನೆರವಾದರು.