ಮಡಿಕೇರಿ:
ಬೆಳಗಿನ ಜಾವ ಉಂಟಾದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಬಾಲಕನೊಬ್ಬ ಸಜೀವ ದಹನವಾದ ಘಟನೆ ಗುರುವಾರ ಬೆಳಗಿನ ಜಾವ ಇಲ್ಲಿಗೆ ಸಮೀಪದ ಕಾಟಗೇರಿಯಲ್ಲಿ ನಡೆದಿದೆ.
ಕಾಟಗೇರಿಯ ವಸತಿ ಶಾಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕನನ್ನು ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ, ಚೆಟ್ಟಿಮಾನಿ ಗ್ರಾಮದ ಪುಷ್ಪಕ್ ಎಂದು ಗುರುತಿಸಲಾಗಿದೆ.
ಬೆಂಕಿ ಆಕಸ್ಮಿಕದಲ್ಲಿ ಶಾಲೆಯ ಮೇಲ್ಛಾವಣಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಈ ವಸತಿ ಶಾಲೆಯ 29 ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೊರ ಬಂದಿದ್ದು, ಎರಡನೇ ತರಗತಿಯ ಪುಷ್ಪಕ್ ಎಂಬಾತ ಬೆಂಕಿಗೆ ಆಹುತಿಯಾಗಿರುವುದಾಗಿ ಹೇಳಲಾಗಿದೆ.
ಗುರುಕುಲ ಮಾದರಿಯ ಈ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಅಗ್ನಿಶಾಮಕ ದಳದ ಅಧಿಕಾರಿ ನಾಗರಾಜ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.