ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಪೇರಿ ಕಾರ್ಯದ ವೇಳೆ ಕ್ರೇನ್ ತುಂಡಾಗಿ ಬಿದ್ದು ಐವರು ಗಾಯಗೊಂಡು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಮೇಡಹಳ್ಳಿಯಲ್ಲಿ ನಡೆದಿದೆ.
ಮೇಡಹಳ್ಳಿಯ ಖಾಸಗಿ ನಿವಾಸ ಪ್ರದೇಶದಲ್ಲಿರುವ ಎಎಸ್ ಕ್ರೇನ್ ಸರ್ವೀಸ್ ಕೇಂದ್ರದಲ್ಲಿ ಕ್ರೇನ್ ರಿಪೇರಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ತಾಂತ್ರಿಕ ದೋಷದಿಂದ ಕ್ರೇನ್ ತುಂಡಾಗಿ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ತಕ್ಷಣವೇ ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳುಗಳು ಲೂಲೂ (30), ಕರ್ಬನ್ (19), ಇಲ್ಲಾಜ್ (38), ಸಮೀರ್ (28) ಮತ್ತು ಶಾಮದೇವ್ (52) ಎಂದು ಗುರುತಿಸಲಾಗಿದೆ.
ಸ್ಥಳೀಯರು ಈ ಕ್ರೇನ್ ಸರ್ವಿಸ್ ಕಾರ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದಲ್ಲೇ ಇಂತಹ ಭಾರೀ ಯಂತ್ರೋಪಕರಣದ ರಿಪೇರಿ ನಡೆಯುತ್ತಿರುವುದಕ್ಕೆ ಹಿಂದೆ ಹಲವಾರು ಬಾರಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನಿವಾಸಿಗಳು ಪ್ರಶ್ನಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.