ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮಥುರಾದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯದ ನೆಲಮಾಳಿಗೆಯಲ್ಲಿರುವ ಖಜಾನೆಯನ್ನು 54 ವರ್ಷಗಳ ನಂತರ ತೆರೆಯಲಾಗಿದೆ.
ಧಂತೇರಸ್ ದಿನವಾದ ಇಂದು 11 ಸದಸ್ಯರ ಸಮಿತಿಯ ಸಮ್ಮುಖದಲ್ಲಿ ದೇವಾಲಯದ ನೆಲಮಾಳಿಗೆಯನ್ನು ತೆರೆಯುವ ಪ್ರಕ್ರಿಯೆ ಆರಂಭವಾಯಿತು. ನೆಲಮಾಳಿಗೆಯಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ವೀಡಿಯೊಗ್ರಾಫ್ ಮಾಡಿ ಪಟ್ಟಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 54 ವರ್ಷಗಳ ನಂತರ ಶ್ರೀ ಠಾಕೂರ್ ಬಂಕೆ ಬಿಹಾರಿ ದೇವಾಲಯದ ನೆಲಮಾಳಿಗೆಯ ರಹಸ್ಯ ಬಹಿರಂಗಗೊಳ್ಳುತ್ತಿದೆ. ಒಳಗಿನಿಂದ ವಜ್ರಗಳು, ಆಭರಣಗಳು, ಚಿನ್ನ ಮತ್ತು ಬೆಳ್ಳಿಯನ್ನು ಹೊರಗೆ ತೆಗೆಯಬಹುದು.
ಈ ದೇವಾಲಯದ ನೆಲಮಾಳಿಗೆಯನ್ನು ಈ ಹಿಂದೆ 1971ರಲ್ಲಿ ತೆರೆಯಲಾಗಿತ್ತು. ಇದಾದ ನಂತರ ದೇವಸ್ಥಾನವನ್ನು ಮುಚ್ಚಲಾಯಿತು. ಅಂದಿನಿಂದ ಅದು ಮುಚ್ಚಲ್ಪಟ್ಟಿತ್ತು.
1971ರ ನಂತರ 1990ರಲ್ಲಿ ಈ ಖಜಾನೆಯನ್ನು ತೆರೆಯಲು ಪ್ರಯತ್ನ ಮಾಡಲಾಯಿತು. ಆದರೆ ಆ ಸಮಯದಲ್ಲಿ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ.
ಬಂಕೆ ಬಿಹಾರಿ ದೇವಾಲಯದ ನೆಲಮಾಳಿಗೆಯಲ್ಲಿ 160 ವರ್ಷಗಳಷ್ಟು ಹಳೆಯದಾದ ನಿಧಿಯನ್ನು ಇಡಲಾಗಿದೆ ಎಂಬ ನಂಬಿಕೆಯಿದೆ. ಈಗ ಈ ನೆಲಮಾಳಿಗೆಯನ್ನು ತೆರೆಯಲಾಗುತ್ತಿರುವುದರಿಂದ, ದೇವಾಲಯದೊಳಗೆ ಎಷ್ಟು ನಿಧಿ ಪತ್ತೆಯಾಗುತ್ತದೆ ಎಂದು ತಿಳಿಯಲು ಭಕ್ತರು ಕುತೂಹಲಗೊಂಡಿದ್ದಾರೆ.