January17, 2026
Saturday, January 17, 2026
spot_img

ಮಳೆಗೆ ಬಲಿಯಾಯ್ತು ರೋಚಕ ಕಾದಾಟ! ಭಾರತ-ಆಸ್ಟ್ರೇಲಿಯಾ ಮೊದಲ T20 ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ T20 ಸರಣಿಯ ಆರಂಭಕ್ಕೆ ವರುಣ ಅಡ್ಡಿಪಡಿಸಿದ್ದು, ಕ್ಯಾನ್‌ಬೆರಾದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ಯಾವುದೇ ಫಲಿತಾಂಶವಿಲ್ಲದೆ ರದ್ದುಗೊಳಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಟೀಂ ಇಂಡಿಯಾ, ಇನಿಂಗ್ಸ್‌ನ ಮೊದಲ ಭಾಗದಲ್ಲಿ ಆಘಾತ ಎದುರಿಸಿತ್ತು. ಕೇವಲ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 43 ರನ್ ಗಳಿಸಿದ್ದಾಗ ಮೊದಲ ಬಾರಿಗೆ ಮಳೆ ಪ್ರತ್ಯಕ್ಷವಾಯಿತು.

ಮಳೆ ನಿಂತ ನಂತರ ಆಟ ಶುರುವಾದಾಗ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತಕ್ಕೆ ಯುವ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಆಧಾರವಾದರು. ಈ ಜೋಡಿ ಆಸೀಸ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿ, ರನ್ ವೇಗವನ್ನು ಹೆಚ್ಚಿಸಿತು. ಅದರಲ್ಲೂ, 10ನೇ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲೇ ವೇಗಿ ನಾಥನ್ ಎಲ್ಲಿಸ್‌ಗೆ ಸೂರ್ಯಕುಮಾರ್ ಯಾದವ್ 15 ರನ್‌ಗಳನ್ನು ಚಚ್ಚಿದರು. ಈ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸುವ ಹಾಗೂ ಪಂದ್ಯ ಗೆಲ್ಲುವ ದೊಡ್ಡ ವಿಶ್ವಾಸದಲ್ಲಿತ್ತು.

ಆದರೆ, ದುರದೃಷ್ಟವಶಾತ್ ಮಳೆ ಮತ್ತೆ ಶುರುವಾಯಿತು ಮತ್ತು ಬಿಡುವೇ ನೀಡಲಿಲ್ಲ. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತು.

ಭಾರತದ ಪ್ರಮುಖ ಪ್ರದರ್ಶನ:
ಸೂರ್ಯಕುಮಾರ್ ಯಾದವ್ (ನಾಯಕ): 39 ರನ್ (24 ಎಸೆತ, 2 ಸಿಕ್ಸರ್‌, 3 ಬೌಂಡರಿ) – ಅಜೇಯ.
ಶುಭಮನ್ ಗಿಲ್: 37 ರನ್ (20 ಎಸೆತ, 1 ಸಿಕ್ಸರ್‌, 4 ಬೌಂಡರಿ) – ಅಜೇಯ.
ಅಭಿಷೇಕ್ ಶರ್ಮಾ: 19 ರನ್ ಗಳಿಸಿ ಔಟಾದರು.

ಮುಂದಿನ ಪಂದ್ಯ:
ಸರಣಿಯ ಎರಡನೇ T20 ಪಂದ್ಯವು ಅಕ್ಟೋಬರ್ 31ರ ಶುಕ್ರವಾರ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Must Read

error: Content is protected !!