February 26, 2026
Thursday, February 26, 2026
spot_img

ಉಗ್ರ ಕೃತ್ಯ ಎಸಗಿದವರ ವಿರುದ್ಧ ಕೈ ನಾಯಕರು ಮಾತನಾಡುತ್ತಿಲ್ಲ: ಸಂಸದ ಕಾರಜೋಳ ಟೀಕೆ

ಹೊಸದಿಗಂತ ವರದಿ,ಚಿತ್ರದುರ್ಗ:

ಉಗ್ರ ಡಾ.ಉಮರ್ ಮತ್ತು ಕೃತ್ಯ ಎಸಗಿದ ಉಗ್ರರೆಲ್ಲ ಯಾರು? ಪಾಕಿಸ್ತಾನದ ನಂಟು ಹೊಂದಿದ ನಮ್ಮ ದೇಶದ ಪ್ರಜೆಗಳು. ಉಗ್ರ ಕೃತ್ಯ ಎಸಗಿದವರ ವಿರುದ್ಧ ಕೈ ನಾಯಕರು ಮಾತನಾಡುತ್ತಿಲ್ಲ. ಉಗ್ರರ ಬಗ್ಗೆ ಪ್ರೀತಿ ಇರುವ ಕಾರಣಕ್ಕೆ ಮಾತನಾಡುತ್ತಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದರು.

ಚಿತ್ರದುರ್ಗ ನಗರದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬಾಂಬ್ ಸ್ಫೋಟಿಸಿದವರ ವಿರುದ್ಧ ಒಂದು ಮಾತನಾಡುತ್ತಿಲ್ಲ. ಅವರ ಬೆಂಬಲ ಉಗ್ರರಿಗೋ ಪಾಕಿಸ್ತಾಕ್ಕೋ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಕೈ ನಾಯಕರು ಪ್ರಧಾನಿ, ಗೃಹ ಮಂತ್ರಿ ರಾಜೀನಾಮೆ ಕೇಳುತ್ತಿದ್ದಾರೆ. ಬಿಹಾರ ಚುನಾವಣೆ ವೇಳೆ ಉಗ್ರ ಕೃತ್ಯ ಎಂಬುದು ಹೀನ ಮನಸ್ಥಿತಿ. ಸೋತಾಗ ಚುನಾವಣೆ ಆಯೋಗದ ವಿರುದ್ಧ ಆರೋಪ ಮಾಡುತ್ತೀರ. ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಸುಮ್ಮನಿರುತ್ತೀರಿ. ಮುಂದಿನ ದಿನಗಳಲ್ಲಿ ಕೋರ್ಟ್ ತೀರ್ಪು ನಿಮ್ಮ ಪರ ಬರದಿದ್ದರೆ ಕೋರ್ಟ್ ಸರಿಯಿಲ್ಲ ಎಂದು ಹೇಳಬಹುದು. ನೆರೆ ರಾಷ್ಟ್ರಗಳಂತೆ ಭಾರತದಲ್ಲೂ ಜನ ದಂಗೆ ಏಳಬೇಕೆಂದ ಹೀನ ಮನಸ್ಥಿತಿ ಕಾಂಗ್ರೆಸ್ನವರದ್ದು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

ಬಿಹಾರ ಚುನಾವಣೆ ಸಂದರ್ಭದಲ್ಲೇ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ ಎಂಬ ವಿರೋಧ ಪಕ್ಷದವರ ಟೀಕೆಗೆ ಪ್ರತಿಕ್ರಿಯಿಸಿ, ಹೀನ ಮನಸ್ಥಿತಿ ಇದ್ದವರು ಈ ರೀತಿ ಮಾತನಾಡುತ್ತಾರೆ ಎಂದರು. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಚಿವ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕಾಂಗ್ರೆಸ್ ಪಕ್ಷ ಜಮೀರ್ ಅವರಿಗೆ ಪವರ್ ಆಫ್ ಅಟಾರ್ನಿ ನೀಡಿರಬಹುದು ಎಂದು ವ್ಯಂಗ್ಯವಾಡಿದರು.

ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪರವಾಗಿ ಎಕ್ಸಿಟ್ ಪೋಲ್ ಬಂದರೆ ನಂಬಿಕೆ ಇರುತ್ತದೆ. ವರುದ್ಧ ಬಂದಲ್ಲಿ ಅವರಿಗೆ ನಂಬಿಕೆ ಇರುವುದಿಲ್ಲ. ಅವರಿಗೆ ಈ ದೇಶದ ವ್ಯವಸ್ಥೆಯ ಬಗ್ಗೆಯೇ ನಂಬಿಕೆ ಇಲ್ಲ. ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !