ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದ ಭೀಕರ ಬಸ್ ಅಪಘಾತದಲ್ಲಿ ಕರ್ನಾಟಕದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯ ಮೂಲದ ಗಣೇಶ ಪೇಟೆ ನಿವಾಸಿ ಅಬ್ದುಲ್ ಗಣಿ ಶಿರಹಟ್ಟಿ(52) ಮೃತಪಟ್ಟ ದುರ್ದೈವಿ ಆಗಿದ್ದಾರೆ.
ಹಲವು ವರ್ಷಗಳಿಂದ ದುಬೈನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಗಣಿ ಶಿರಹಟ್ಟಿ ದುಬೈ ನಿಂದ ಉಮ್ರಾ ಯಾತ್ರೆ ಕೈಗೊಂಡು ಭಾರತೀಯಯರಿದ್ದ ಬಸ್ ನಲ್ಲಿಯೇ ತೆರಳಿದ್ದರು. ಕಳೆದ ದಿನ ಮೆಕ್ಕಾನಿಂದಾ ಮಧೀನಾಗೆ ತೆರಳುವ ರಸ್ತೆ ಮಧ್ಯ ಡಿಸೆಲ್ ಟ್ಯಾಂಕರ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಮೃತ ಅಬ್ದುಲ್ ಗಣಿ ಓರ್ವ ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಅಪಘಾತದ ಸುದ್ದಿ ತಿಳಿದು ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿರುವ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮನೆಗೆ ಭೇಟಿ ನೀಡಿದ್ದು, ಸಹಾಯ ಮಾಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಗೆ ಮನವಿ ಮಾಡಿದ್ದಾರೆ.
ಅಬ್ದುಲ್ ಗಣಿ ನವೆಂಬರ್ 9 ರಂದು ದುಬೈನಿಂದ ಸೌದಿಗೆ ಪ್ರವಾಸ ಹೋಗಿದ್ದರು. ಅಬುಧಾಬಿಯ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಡ್ರೈವರ್ ಆಗಿದ್ದ ಅಬ್ದುಲ್ ಗಣಿ ಯಾತ್ರೆಗೆಂದು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕಿಡಾಗಿ ಮೃತಪಟ್ಟಿದ್ದಾರೆ.
45 ಭಾರತೀಯರು ಸಾವು
ಸೌದಿ ಅರೇಬಿಯಾದ ಮದೀನಾ ಬಳಿ ಸೋಮವಾರ ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 45 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪ್ರಾಣ ಕಳೆದುಕೊಂಡವರನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ಮಾಹಿತಿ ನೀಡಿವೆ. ಮೊಹಮ್ಮದ್ ಅಬ್ದುಲ್ ಶೋಯಬ್ ಎಂಬ ವ್ಯಕ್ತಿ ಬದುಕುಳಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

