ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಭಾರಿ ದುರಂತ ಸಂಭವಿಸಿದೆ. ಅಪರೂಪದ ಕೃಷ್ಣಮೃಗಗಳ ಸರಣಿ ಸಾವು ಸಂಭವಿಸಿದ್ದು, ಬ್ಯಾಕ್ಟೀರಿಯಾದಿಂದಾಗಿ ಇದುವರೆಗೆ ಬರೋಬ್ಬರಿ 31 ಮೃಗಗಳು ಮೃತಪಟ್ಟಿವೆ. ಉಳಿದಿರುವ ಏಳು ಕೃಷ್ಣಮೃಗಗಳ ಜೀವ ಉಳಿಸಲು ಮೃಗಾಲಯದ ವೈದ್ಯರು ಹಾಗೂ ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
ಸರಣಿ ಸಾವು ಸಂಭವಿಸಿದ ತಕ್ಷಣ ಎಚ್ಚೆತ್ತುಕೊಂಡ ವೈದ್ಯರ ತಂಡ, ಉಳಿದ ಏಳೂ ಕೃಷ್ಣಮೃಗಗಳಿಗೆ ತಕ್ಷಣವೇ ಆಂಟಿ ಬಯೋಟಿಕ್ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ.
ಕೃಷ್ಣಮೃಗಗಳ ಸಾವಿಗೆ ಪ್ರಬಲವಾಗಿ ‘ಗಳಲೆ ರೋಗ’ ಎಂಬ ಬ್ಯಾಕ್ಟೀರಿಯಾ ಸೋಂಕು ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮೃಗಾಲಯದ ಸಿಬ್ಬಂದಿ ಸೋಂಕಿನ ಮೂಲವನ್ನು ನಾಶಪಡಿಸಲು ಮೃಗಾಲಯದ ಆವರಣದಾದ್ಯಂತ ವಿಶೇಷ ಔಷಧಿ ಸಿಂಪಡಣೆ ಮಾಡಿದ್ದಾರೆ.
ಈ ರೋಗವು ಇತರೆ ಪ್ರಾಣಿ ಮತ್ತು ಸಾಕುಪ್ರಾಣಿಗಳಿಗೆ ಹರಡುವ ಭೀತಿ ಇರುವುದರಿಂದ, ಮೃಗಾಲಯದ ಸುತ್ತಮುತ್ತಲಿನ ಗ್ರಾಮಗಳಿಗೂ ಎಚ್ಚರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಪ್ರಾಣಿಗಳಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

