ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ರಾಮದುರ್ಗ ಸಮೀಪದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಅಸುನೀಗಿದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಇವರೊಂದಿಗೆ ಮೃತಪಟ್ಟ ಇತರ ಮೂವರ ಅಂತ್ಯಕ್ರಿಯೆಯು ಏಕಕಾಲಕ್ಕೆ ನೆರವೇರಿತು.
ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಹೃದಯವಿದ್ರಾವಕ ಸಂಗತಿ ಎಂದರೆ, ದಿವಂಗತ ಅಧಿಕಾರಿಯ ಅಂತ್ಯಕ್ರಿಯೆಯನ್ನು ಅವರ ತಾಯಿಯ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ಅಂತ್ಯಕ್ರಿಯೆಗೂ ಮುನ್ನ, ರಾಮದುರ್ಗ ಪಟ್ಟಣದ ಪಂಚಗಟಿಮಠ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ, ಮೃತ ಅಧಿಕಾರಿಗೆ ಗೌರವ ಸಲ್ಲಿಸಲು ಪೊಲೀಸ್ ಸಿಬ್ಬಂದಿಯು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಈ ದುರದೃಷ್ಟಕರ ಘಟನೆಯಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಒಟ್ಟು ನಾಲ್ವರು ಪ್ರಾಣ ಕಳೆದುಕೊಂಡಿದ್ದರು.

