February 5, 2026
Thursday, February 5, 2026
spot_img

ಪಾಕಿಸ್ತಾನದ ಮಾನವ ಹಕ್ಕುಗಳ ದಾಖಲೆ ಕೆದಕಿದ ಭಾರತ: ಅಯೋಧ್ಯೆ ವಿವಾದಕ್ಕೆ ದಿಟ್ಟ ಪ್ರತ್ಯುತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪವಿತ್ರ ಕೇಸರಿ ಧ್ವಜಾರೋಹಣ ನಡೆಸಿದ್ದಕ್ಕೆ ಪಾಕಿಸ್ತಾನ ನೀಡಿರುವ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು, ಪಾಕಿಸ್ತಾನವು “ಇತರರಿಗೆ ಉಪದೇಶ ನೀಡುವ ಯಾವುದೇ ನೈತಿಕ ಸ್ಥಾನವನ್ನು ಉಳಿಸಿಕೊಂಡಿಲ್ಲ” ಎಂದು ಖಾರವಾಗಿ ಹೇಳಿದ್ದಾರೆ.

ಪಾಕಿಸ್ತಾನದ ಆಧಾರರಹಿತ ಆರೋಪಗಳು

ಮಂಗಳವಾರದಂದು ಪ್ರಧಾನಿ ಮೋದಿ ಅವರು ರಾಮ ಮಂದಿರದ ಮೇಲೆ ಭವ್ಯವಾಗಿ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇವಾಲಯದ ನಿರ್ಮಾಣ ಪೂರ್ಣಗೊಂಡಿದ್ದನ್ನು ಔಪಚಾರಿಕವಾಗಿ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ಭಾರತವು “ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ತೋರುತ್ತಿದೆ ಮತ್ತು ಮುಸ್ಲಿಂ ಸಂಸ್ಕೃತಿ ಹಾಗೂ ಪರಂಪರೆಯನ್ನು ನಿರ್ಮೂಲನೆ ಮಾಡುತ್ತಿದೆ” ಎಂದು ಆರೋಪಿಸಿತ್ತು. ಅಲ್ಲದೇ, ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ ಭಾರತ ಸರ್ಕಾರದ ಮತ್ತು ನ್ಯಾಯಾಂಗದ ಕ್ರಮವನ್ನು ಸಹ ಅದು ಟೀಕಿಸಿತ್ತು.

ಭಾರತದ ಖಡಕ್ ತಿರುಗೇಟು

ಪಾಕಿಸ್ತಾನದ ಈ ಆಧಾರರಹಿತ ಆಕ್ರೋಶಕ್ಕೆ ತಕ್ಷಣವೇ ತಿರುಗೇಟು ನೀಡಿದ ಭಾರತ, ಪಾಕಿಸ್ತಾನದ ಮಾನವ ಹಕ್ಕುಗಳ ದಾಖಲೆಯನ್ನು ಎತ್ತಿ ಹಿಡಿಯಿತು.

ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, “ತನ್ನ ದೇಶದಲ್ಲಿ ಪದೇಪದೇ ಮಾನವಹಕ್ಕುಗಳ ಮೇಲೆ ದಾಳಿ ನಡೆಸುತ್ತಲೇ ಇರುತ್ತದೆ. ಅಲ್ಪಸಂಖ್ಯಾತರ ಮೇಲಿನ ಧರ್ಮಾಂಧತೆ, ದಮನ ಮತ್ತು ವ್ಯವಸ್ಥಿತ ದುರುಪಯೋಗದ ಆಳವಾದ ಕಳಂಕಿತ ದಾಖಲೆಯನ್ನು ಹೊಂದಿರುವ ದೇಶವಾಗಿರುವ ಪಾಕಿಸ್ತಾನವು, ಭಾರತಕ್ಕೆ ಉಪದೇಶ ನೀಡುವ ಯಾವುದೇ ನೈತಿಕ ಸ್ಥಾನವನ್ನು ಉಳಿಸಿಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದರು.

ರಣಧೀರ್ ಜೈಸ್ವಾಲ್ ಅವರು, “ಬೂಟಾಟಿಕೆಯ ಧರ್ಮೋಪದೇಶಗಳನ್ನು ನೀಡುವ ಬದಲು, ಪಾಕಿಸ್ತಾನವು ತನ್ನ ದೃಷ್ಟಿಯನ್ನು ಬದಲಿಸಿಕೊಂಡು, ತನ್ನದೇ ಆದ ಮಾನವ ಹಕ್ಕುಗಳ ರಕ್ಷಣೆಯ ಮೇಲೆ ಕೇಂದ್ರೀಕರಿಸುವುದು ಉತ್ತಮ” ಎಂದು ಸಲಹೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !