January21, 2026
Wednesday, January 21, 2026
spot_img

ರಾಜ್ಯದ ಕೈಗಾರಿಕಾ ಪ್ರಗತಿಗೆ ಹೊಸ ಅಡಿಪಾಯ: 32 ಕೋಟಿ ವೆಚ್ಚದ KIADB ಭವನ ಉದ್ಘಾಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಹೃದಯಭಾಗವಾದ ಗಾಂಧಿನಗರದಲ್ಲಿ ನಿರ್ಮಿಸಲಾದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಹೊಸ ಅತ್ಯಾಧುನಿಕ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಉದ್ಘಾಟಿಸಿ, ರಾಜ್ಯದ ಕೈಗಾರಿಕಾ ವಲಯದ ಬಲವರ್ಧನೆಗೆ ಮಹತ್ವದ ಹೆಜ್ಜೆ ಇಟ್ಟರು.

ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು 2,618 ಚದರ ಮೀಟರ್ ಪ್ರದೇಶದಲ್ಲಿ ತಲೆಯೆತ್ತಿರುವ ಈ ಭವನವು ಎರಡು ನೆಲ ಅಂತಸ್ತುಗಳು, ಐದು ಪ್ರಮುಖ ಮಹಡಿಗಳು ಮತ್ತು ಒಂದು ತಾರಸಿ ಮಹಡಿಯನ್ನು ಒಳಗೊಂಡಿದೆ. ಸುಗಮ ಕಾರ್ಯಾಚರಣೆಗಾಗಿ, ಕೆಳ ಬೇಸ್‌ಮೆಂಟ್‌ನಲ್ಲಿ 58 ಕಾರುಗಳು ಮತ್ತು ಮೇಲಿನ ಬೇಸ್‌ಮೆಂಟ್‌ನಲ್ಲಿ 38 ಕಾರುಗಳ ನಿಲುಗಡೆಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇನ್ನು, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು KIADB ಯ 2 ಕೋಟಿ ಲಾಭಾಂಶವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಔದಾರ್ಯದಿಂದ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ, ಕಟ್ಟಡ ನಿರ್ಮಾಣದ ಕಲ್ಪನೆಗೆ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ತೀರ್ಮಾನ ಕೈಗೊಂಡಿದ್ದ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಗೌರವಿಸಲಾಯಿತು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೆಐಎಡಿಬಿ ಸಿಇಒ ಡಾ. ಮಹೇಶ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ನೂತನ ಕಟ್ಟಡವು ರಾಜ್ಯದ ಕೈಗಾರಿಕಾ ಮತ್ತು ಬಂಡವಾಳ ಹೂಡಿಕೆ ಉತ್ತೇಜನಾ ಚಟುವಟಿಕೆಗಳಿಗೆ ಹೊಸ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

Must Read