ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ವಿಮಾನ ಹಾರಾಟದಲ್ಲಿನ ಎಡವಟ್ಟುಪ್ರಯಾಣಿಕರು ಸಂಕಷ್ಟಕ್ಕೆ ತಳ್ಳಿದ್ದು, ಇದೀಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಇಂಡಿಗೋ ಏರ್ಲೈನ್ಸ್ ವಿಮಾನಗಳ ಹಾರಾಟ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಬಾಕಿ ಹಣ ಪಾವತಿಸಿದ ಇಂಡಿಗೋ ಏರ್ಲೈನ್ಸ್ಗೆ ಖಡಕ್ ಸಂದೇಶವನ್ನು ಕೇಂದ್ರ ವಿಮಾನಯಾನ ಸಚಿವಾಲಯವು ನೀಡಿದೆ.
ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣವನ್ನು ಮರುಪಾವತಿಸುವಂತೆ ಸೂಚನೆ ನೀಡಿದೆ. ಒಂದು ವೇಳೆ ಮರುಪಾವತಿ ಮಾಡದಿದ್ದರೆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇದರ ಜತೆಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಇತರ ವಿಮಾನಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಅದಕ್ಕಾಗಿ ಈ ಬಿಕ್ಕಟ್ಟು ಪರಿಹಾರ ಆಗುವವರೆಗೆ ವಿಮಾನಯಾನ ಸಚಿವಾಲಯ ಎಲ್ಲಾ ಏರ್ಲೈನ್ಸ್ಗಳಿಗೆ ಅನ್ವಯವಾಗುವಂತೆ ಏಕರೂಪ ದರ ನಿಗದಿ ಮಾಡಿದೆ.
ಇಂಡಿಗೋ ಏರ್ಲೈನ್ಸ್ ವಿಮಾನಗಳ ಹಾರಾಟ ರದ್ದಾಗಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಎಂದು ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಿದೆ. ಸಂಜೆ 6 ಗಂಟೆಗೆ ಸಚಿವಾಲಯಕ್ಕೆ ಬರುವಂತೆ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿತ್ತು.ಇದೀಗ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ವಿಮಾನಯಾನ ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನು ಕೆಲವೇ ಕ್ಷಣದಲ್ಲಿ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳ ಜತೆಗೆ ಸಭೆ ನಡೆಯಲಿದೆ.
ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ವಾಪಸ್ ಮಾಡುವುದರ ಜತೆಗೆ ಲಗೇಜ್ ಹಾಗೂ ವಸ್ತುಗಳನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ 48 ಗಂಟೆಯೊಳಗೆ ತಲುಪಿಸುವಂತೆ ಆದೇಶ ನೀಡಿದೆ. ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನ ರದ್ದಾಗಿತ್ತು. ಹಾರಾಟ ರದ್ದಿನಿಂದ ಹಣ ನೀಡಿ ಟಿಕೆಟ್ ಖರೀದಿಸಿದ್ದ ಪ್ರಯಾಣಿಕರು ಪರದಾಡಿದ್ರು, ಹೀಗಾಗಿ ಬುಕ್ ಆಗಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡವರಿಗೆ ಹಣ ವಾಪಸ್ ಆಗಿರಲಿಲ್ಲ. ಇದೀಗ ಈ ಗೊಂದಲಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ನಾಳೆ ರಾತ್ರಿ 8 ಗಂಟೆಯೊಳಗೆ ಹಣ ನೀಡುವಂತೆ. ಹಾಗೂ ಮರು ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಯಾವುದೇ ಶುಲ್ಕವಿಲ್ಲದೆ ಟಿಕೆಟ್ ಬುಕ್ ಮಾಡಿಕೊಡುವಂತೆ ಆದೇಶ ನೀಡಿದೆ.

