ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳು ಎಕ್ಸ್ಪ್ರೆಸ್ ರೈಲಿನ ವೇಗದಲ್ಲಿ ಓಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅದನ್ನು ರಿಫಾರ್ಮ್ ಎಕ್ಸ್ಪ್ರೆಸ್ಎಂದು ವ್ಯಾಖ್ಯಾನಿಸಿದ್ದಾರೆ. ಸುಧಾರಣೆಗಳು ವೇಗವಾಗಿ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಮುನ್ನುಗ್ಗುತ್ತಿವೆ ಎಂದು ಎನ್ಡಿಎ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ. ಸರ್ಕಾರದ ಸುಧಾರಣೆಗಳು ಕೇವಲ ಆರ್ಥಿಕ ಅಥವಾ ಆದಾಯ ಕೇಂದ್ರಿತವಲ್ಲ, ಸಂಪೂರ್ಣವಾಗಿ ನಾಗರಿಕ ಕೇಂದ್ರಿತವಾಗಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸಾಮಾನ್ಯ ನಾಗರಿಕರ ದೈನಂದಿನ ಕಷ್ಟಗಳನ್ನು ನಿವಾರಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಸಂಸದರಿಗೆ ತಿಳಿಸಿದರು.
ಇದರಿಂದ ಪ್ರತಿಯೊಬ್ಬರೂ ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಬಹುದು. ರಿಫಾರ್ಮ್ ಎಕ್ಸ್ಪ್ರೆಸ್ ಪ್ರತಿ ಮನೆಯನ್ನು ತಲುಪಬೇಕು ಮತ್ತು ದೈನಂದಿನ ಸಮಸ್ಯೆಗಳನ್ನು ನಿವಾರಿಸಬೇಕು. ಪ್ರಧಾನಿ ಮೋದಿ ಅವರು ಸಂಸದರಿಗೆ ತಮ್ಮ ಕ್ಷೇತ್ರಗಳಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಆಲಿಸುವಂತೆ ಮನವಿ ಮಾಡಿದರು. ಸುಧಾರಣೆಗಳ ಪ್ರಯೋಜನಗಳು ಕಟ್ಟ ಕಡೆಯ ವ್ಯಕ್ತಿವರೆಗೆ ತಲುಪುವಂತೆ ಸಮಸ್ಯೆಗಳ ಆಧಾರದ ಮೇಲೆ ನೀತಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
30-40 ಪುಟಗಳ ಫಾರ್ಮ್ಗಳನ್ನು ಭರ್ತಿ ಮಾಡಿ ಒಂದೇ ರೀತಿಯ ಡೇಟಾವನ್ನು ಪದೇ ಪದೇ ಕೇಳುವ ಸಂಸ್ಕೃತಿಯನ್ನು ನಿರ್ಮೂಲನೆ ಮಾಡಬೇಕು ನಾಗರಿಕರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸಬೇಕು. ನಾಗರಿಕರನ್ನು ನಂಬಿ ಸರ್ಕಾರ ಸ್ವಯಂ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಮತ್ತು ಕಳೆದ ಹತ್ತು ವರ್ಷಗಳಲ್ಲಿ ಇದನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಅವರು ಒತ್ತಿ ಹೇಳಿದರು.

