Friday, December 19, 2025

ಮಂಡಿ ಪ್ರವಾಹ: ಕಾಣೆಯಾದ 28 ಜನರನ್ನು ಮೃತರೆಂದು ಘೋಷಿಸಿದ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಆರು ತಿಂಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರವಾಹದ ವೇಳೆ ಕಾಣೆಯಾದ 29 ಜನರಲ್ಲಿ 28 ಮಂದಿಯನ್ನು ಮೃತರೆಂದು ಅಧಿಕೃತವಾಗಿ ಘೋಷಿಸಲಾಗಿದ್ದು, ಅವರ ಕುಟುಂಬಗಳಿಗೆ ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಕ್ರಮದಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮೊತ್ತ ಪಡೆಯುವ ಪ್ರಕ್ರಿಯೆಗೆ ಮುನ್ನುಡಿ ಬಿದ್ದಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತ ನಂತರ ಈ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮರಣ ಪ್ರಮಾಣಪತ್ರ ನೀಡಿದ ಬಳಿಕ ಪ್ರತಿ ಕುಟುಂಬಕ್ಕೆ ನಾಲ್ಕು ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟು 28 ಕುಟುಂಬಗಳಿಗೆ ಪರಿಹಾರ ನೀಡಲಾಗಲಿದ್ದು, ಒಟ್ಟು ಮೊತ್ತ ಸುಮಾರು 1.12 ಕೋಟಿ ರೂ. ಆಗಲಿದೆ.

ಆಡಳಿತದ ಮಾಹಿತಿ ಪ್ರಕಾರ, ತುನಾಗ್ ಉಪವಿಭಾಗದ 18 ಮಂದಿ, ಗೋಹರ್ ಉಪವಿಭಾಗದ ಏಳು ಮಂದಿ, ಧರಂಪುರದ ಇಬ್ಬರು ಹಾಗೂ ಕರ್ಸೋಗ್‌ನ ಒಬ್ಬರನ್ನು ಮೃತರೆಂದು ಘೋಷಿಸಲಾಗಿದೆ. ಆದರೆ ಪಶ್ಚಿಮ ಬಂಗಾಳದ ಮೂಲದ ಒಬ್ಬ ವ್ಯಕ್ತಿಯ ಗುರುತು ಇನ್ನೂ ದೃಢವಾಗದ ಕಾರಣ, ಅವರ ಮರಣ ಪ್ರಮಾಣಪತ್ರ ಪ್ರಕ್ರಿಯೆ ಮುಂದುವರಿದಿದೆ.

ಜೂನ್ 28ರಂದು ಸೆರಾಜ್ ಪ್ರದೇಶದ ದೇಜಿ ಗ್ರಾಮ ಮತ್ತು ಗೋಹರ್‌ನ ಸ್ಯುಂಜ್ ಪ್ರದೇಶದಲ್ಲಿ ಪ್ರವಾಹ ಅತ್ಯಂತ ವಿನಾಶಕಾರಿ ಪರಿಣಾಮ ಬೀರಿತ್ತು. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ದೀರ್ಘಕಾಲ ಶೋಧ ಕಾರ್ಯಾಚರಣೆ ನಡೆಸಿದರೂ ಯಾರೂ ಪತ್ತೆಯಾಗಿರಲಿಲ್ಲ. ಕೇದಾರನಾಥ ದುರಂತದ ಪೂರ್ವ ಉದಾಹರಣೆಯ ಆಧಾರದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಾರ್ವಜನಿಕ ಆಕ್ಷೇಪಣೆಗಳ ಬಳಿಕ ಇದೀಗ ಅಂತಿಮ ಕ್ರಮ ಕೈಗೊಳ್ಳಲಾಗಿದೆ.

error: Content is protected !!