ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ಕ್ಕೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಬಾರಿ ಟೀಮ್ ಇಂಡಿಯಾದ ಹೊಣೆಗಾರಿಕೆಯನ್ನು ಸೂರ್ಯಕುಮಾರ್ ಯಾದವ್ ವಹಿಸಿಕೊಂಡಿದ್ದಾರೆ. 15 ಸದಸ್ಯರ ತಂಡಕ್ಕೆ ಅವರನ್ನು ನಾಯಕನಾಗಿ ನೇಮಿಸಲಾಗಿದ್ದು, ಅಕ್ಷರ್ ಪಟೇಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ತಂಡ ಆಯ್ಕೆ ವೇಳೆ ಪ್ರಮುಖ ಬೆಳವಣಿಗೆಯಾಗಿ ಶುಭ್ಮನ್ ಗಿಲ್ ಅವರನ್ನು ಈ ಟೂರ್ನಿಯಿಂದ ಕೈಬಿಡಲಾಗಿದೆ.
ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ ತನ್ನ ಅಭಿಯಾನವನ್ನು ಯುಎಸ್ಎ ವಿರುದ್ಧ ಮುಂಬೈನಲ್ಲಿ ಆರಂಭಿಸಲಿದೆ. ಫೆಬ್ರವರಿ 15ರಂದು ಬಹುನಿರೀಕ್ಷಿತ ಭಾರತ–ಪಾಕಿಸ್ತಾನ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಈಗಾಗಲೇ ಭಾರೀ ಕುತೂಹಲ ಮೂಡಿದೆ. ಗ್ರೂಪ್ ಹಂತದಲ್ಲಿ ನಮೀಬಿಯಾ ಮತ್ತು ನೆದರ್ಲೆಂಡ್ಸ್ ವಿರುದ್ಧವೂ ಭಾರತ ಕಣಕ್ಕಿಳಿಯಲಿದೆ.
ಸೂರ್ಯಕುಮಾರ್ ನೇತೃತ್ವದ ತಂಡದಲ್ಲಿ ಅನುಭವ ಮತ್ತು ಯುವ ಪ್ರತಿಭೆಗಳ ಸಮತೋಲನಕ್ಕೆ ಒತ್ತು ನೀಡಲಾಗಿದ್ದು, ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್ ಸ್ಥಾನ ಪಡೆದಿದ್ದಾರೆ.
ನಾಲ್ಕು ಗ್ರೂಪ್ಗಳ ಪೈಕಿ ಭಾರತ ಗ್ರೂಪ್–1ರಲ್ಲಿ ಪಾಕಿಸ್ತಾನ್ ಸೇರಿದಂತೆ ಬಲಿಷ್ಠ ತಂಡಗಳೊಂದಿಗೆ ಸ್ಪರ್ಧಿಸಲಿದೆ. ಗ್ರೂಪ್ ಹಂತದ ಬಳಿಕ ಸೂಪರ್–8 ಹಾಗೂ ಸೆಮಿಫೈನಲ್ ಹಂತಗಳು ನಡೆಯಲಿದ್ದು, ಈ ಟೂರ್ನಿಯಲ್ಲಿ ಭಾರತ ಮತ್ತೊಮ್ಮೆ ಕಿರೀಟ ಗೆಲ್ಲುವ ಕನಸು ಹೊತ್ತು ಕಣಕ್ಕಿಳಿಯಲಿದೆ.

