ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಪಡೆಯ (IAF) ನಿವೃತ್ತ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಕೊಲೆಯನ್ನು ಅವರ ಪುತ್ರರೇ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹತ್ಯೆ ಮಾಡಿದ ಐದು ದಿನಗಳ ಬಳಿಕ ಈ ವಿಚಾರ ತಿಳಿದುಬಂದಿದ್ದು, ಪುತ್ರರು ತಮ್ಮ ತಂದೆಯ ಕೊಲೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಕೊಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕೂಡ ಭಾಗಿಯಾಗಿದ್ದಾರೆ
ಬಾಗ್ಪತ್ ಜಿಲ್ಲೆಯ ನಿವೃತ್ತ ಐಎಎಫ್ ಉದ್ಯೋಗಿ ಯೋಗೇಶ್ (58) ಕೊಲೆಯಾದ ದುರ್ದೈವಿ. ಯೋಗೇಶ್ ಅವರನ್ನು ಡಿಸೆಂಬರ್ 26 ರಂದು ಲೋನಿ ಪ್ರದೇಶದ ಅಶೋಕ್ ವಿಹಾರ್ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಲೋನಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ತಿಳಿಸಿದ್ದಾರೆ.
ಯೋಗೇಶ್ ತನ್ನ ಪುತ್ರರನ್ನು ಮನೆಯಿಂದ ಹೋಗುವಂತೆ ಹೇಳಿದ್ದರು. ಹೀಗಾಗಿ ಆಸ್ತಿಯ ದುರಾಸೆಯಿಂದ ಅವರ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ರರು ನೆರೆಮನೆಯವರಾದ ಅರವಿಂದ್ (32) ಎಂಬಾತನಿಗೆ ತಂದೆಯನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದರು ಎಂದು ಹೇಳಲಾಗಿದೆ. ಕೌಶಂಬಿ ಜಿಲ್ಲೆಯಲ್ಲಿ ನಿಯೋಜಿತರಾಗಿರುವ ಕಾನ್ಸ್ಟೇಬಲ್ ನವೀನ್ ಜೊತೆ ಸೇರಿ ಅರವಿಂದ್, ಯೋಗೇಶ್ ಅವರಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಅರವಿಂದ್ ಮತ್ತು ನವೀನ್, ಯೋಗೇಶ್ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡರು ಎಂದು ಎಸಿಪಿ ಹೇಳಿದರು.
ಬಂಧಿತನಿಂದ 315 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್, ಎರಡು ಲೈವ್ ಕಾರ್ಟ್ರಿಡ್ಜ್ಗಳು ಮತ್ತು ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಸ್ಟೇಬಲ್ ನವೀನ್ ಮತ್ತು ಮೃತರ ಇಬ್ಬರು ಪುತ್ರರು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ

