ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನಗೋಡು ಬಳಿಯ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಸಂಭವಿಸಿರುವ ಚುಕ್ಕಿ ಜಿಂಕೆಗಳ ಸಾವುಗಳು ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಪ್ರಾರಂಭದಲ್ಲಿ ಸಾಂಕ್ರಾಮಿಕ ರೋಗ ಶಂಕೆ ವ್ಯಕ್ತವಾಗಿದ್ದರೂ, ಇದೀಗ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಆಹಾರವೇ ಸಮಸ್ಯೆಯ ಮೂಲವಾಗಿರಬಹುದೆಂಬ ಅನುಮಾನ ಗಟ್ಟಿಯಾಗುತ್ತಿದೆ.
ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ್ದ ಹಿನ್ನೆಲೆ, ಶಾಸಕ ಕೆ.ಎಸ್. ಬಸವಂತಪ್ಪ ಅವರು ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಆಹಾರದಲ್ಲಿ ಕೊಳೆತ ತರಕಾರಿ ಮತ್ತು ಹಣ್ಣುಗಳು ಇರುವುದನ್ನು ಗಮನಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಪ್ರಾಣಿಗಳಿಗೆ ಸರಿಯಾದ ಆಹಾರ ನೀಡಲಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ, ಮೃಗಾಲಯದಲ್ಲಿ ಕಾಡುಕೋಳಿಗಳ ಸಂಖ್ಯೆಯೂ ವರ್ಷಗಳಿಂದ ಹೆಚ್ಚಾಗುತ್ತಿಲ್ಲ. ಹತ್ತು ವರ್ಷಗಳಿಂದ ಕೇವಲ ಎರಡು ಕೋಳಿಗಳೇ ಇದ್ದು, ಅವುಗಳ ಮೊಟ್ಟೆ ಹಾಗೂ ಮರಿಗಳು ಕಾಣೆಯಾಗುತ್ತಿರುವ ಬಗ್ಗೆ ಸಹ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


