ಉಡುಗೊರೆ ನೀಡುವುದು ನಮ್ಮ ಸಂಸ್ಕೃತಿಯಲ್ಲಿ ಆತ್ಮೀಯತೆಯ ಸುಂದರ ಭಾವ. ಆದರೆ ಪ್ರಾಚೀನ ಭಾರತೀಯ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವೂ ತನ್ನದೇ ಆದ ಶಕ್ತಿಯನ್ನು ಹೊತ್ತುಕೊಂಡಿರುತ್ತದೆ. ಅದೇ ಕಾರಣಕ್ಕೆ, ಕೆಲವು ಉಡುಗೊರೆಗಳು ತಿಳಿಯದೇ ಸಂಬಂಧಗಳಲ್ಲಿ ಅಂತರ, ಮನಸ್ಸಿನಲ್ಲಿ ಅಶಾಂತಿ ಅಥವಾ ಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. ವಾಸ್ತು ತಜ್ಞರ ಅಭಿಪ್ರಾಯದಂತೆ, ಕೆಲವೊಂದು ವಸ್ತುಗಳನ್ನು ಯಾರಿಗೂ ಉಡುಗೊರೆಯಾಗಿ ನೀಡುವುದು ಒಳಿತಲ್ಲ.
ಕರವಸ್ತ್ರ (ಹ್ಯಾಂಡ್ಕರ್ಚೀಫ್)
ಜ್ಯೋತಿಷ್ಯ ನಂಬಿಕೆಯಂತೆ, ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದು ಸಂಬಂಧಗಳಲ್ಲಿ ಮನಸ್ತಾಪ ಮತ್ತು ನಿರಾಶಾವಾದಿ ಶಕ್ತಿಯನ್ನು ಉಂಟುಮಾಡಬಹುದು. ಇದು ಸ್ನೇಹ ಅಥವಾ ಆತ್ಮೀಯ ಸಂಬಂಧದಲ್ಲಿ ಅಸಹಜತೆಯನ್ನು ತಂದೊಡ್ಡುತ್ತದೆ ಎಂದು ಹೇಳಲಾಗುತ್ತದೆ.
ಪಾದರಕ್ಷೆಗಳು
ಶೂ ಅಥವಾ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ತಪ್ಪಿಸಬೇಕಾದದ್ದು. ವಾಸ್ತು ಪ್ರಕಾರ, ಇವು ಸಂಬಂಧದಲ್ಲಿ ದೂರಕ್ಕೆ ಕಾರಣವಾಗುವ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.
ದೇವರ ವಿಗ್ರಹಗಳು
ಧಾರ್ಮಿಕವಾಗಿ ಪವಿತ್ರವೆನಿಸಿದರೂ, ದೇವರ ಪ್ರತಿಮೆಗಳನ್ನು ಉಡುಗೊರೆಯಾಗಿ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಇದೆ. ಎಲ್ಲರೂ ಅವುಗಳನ್ನು ನಿಯಮಾನುಸಾರ, ಗೌರವದಿಂದ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲದಿರುವುದರಿಂದ ನಕಾರಾತ್ಮಕ ಫಲಿತಾಂಶ ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಮಹಾಭಾರತದಂತಹ ಪೌರಾಣಿಕ ಗ್ರಂಥಗಳು
ಮಹಾಭಾರತವನ್ನು ಉಡುಗೊರೆಯಾಗಿ ನೀಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿ ಇದೆ. ಇದು ಜೀವನದಲ್ಲಿ ಸಂಘರ್ಷದ ಸಂಕೇತವಾಗಿ ಪರಿಗಣಿಸಲಾಗುತ್ತದೆ.
ಹರಿತವಾದ ವಸ್ತುಗಳು
ಚಾಕು, ಕತ್ತರಿ ಮುಂತಾದ ಚೂಪಾದ ವಸ್ತುಗಳು ಸಂಬಂಧವನ್ನು ‘ಕತ್ತರಿಸುವ’ ಸಂಕೇತವೆಂದು ನಂಬಲಾಗುತ್ತದೆ. ಆದ್ದರಿಂದ ಇವುಗಳನ್ನು ಗಿಫ್ಟ್ ನೀಡುವುದು ಒಳಿತಲ್ಲ.
ಕಪ್ಪು ಬಟ್ಟೆಗಳು
ಕಪ್ಪು ಬಣ್ಣ ಫ್ಯಾಷನ್ಗೆ ಜನಪ್ರಿಯವಾಗಿದ್ದರೂ, ಜ್ಯೋತಿಷ್ಯ ಪ್ರಕಾರ ಅದು ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ. ಶುಭ ಸಂದರ್ಭಗಳಲ್ಲಿ ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


