ಮಂತ್ರಾಲಯ ಎಂದಾಕ್ಷಣ ಭಕ್ತರ ಮನಸ್ಸಿನಲ್ಲಿ ಮೊದಲು ಮೂಡುವುದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಸ್ಮರಣೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇರುವ ಈ ಪವಿತ್ರ ಕ್ಷೇತ್ರ ಕರ್ನಾಟಕದ ಅನೇಕ ಭಕ್ತರಿಗೆ ಜೀವನಾಡಿಯಂತಿದೆ. ರಾಯರ ಮಠದಲ್ಲಿ ದರ್ಶನ ಪಡೆದು ಮನಸ್ಸು ಶಾಂತಿಗೊಂಡ ಬಳಿಕ, ಮಂತ್ರಾಲಯದ ಸುತ್ತಲೂ ಇರುವ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಯಾತ್ರೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಪ್ರಕೃತಿ, ಪುರಾಣ ಮತ್ತು ಇತಿಹಾಸ ಒಂದೇ ಹಾದಿಯಲ್ಲಿ ಬೆಸೆದುಕೊಂಡಿರುವ ಈ ಸ್ಥಳಗಳು ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತವೆ.
ಅದೋನಿ ಕೋಟೆ – ಇತಿಹಾಸದ ಭವ್ಯ ಸಾಕ್ಷಿ
ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅದೋನಿ ಕೋಟೆ ಮಂತ್ರಾಲಯದ ಸಮೀಪದ ಪ್ರಮುಖ ಐತಿಹಾಸಿಕ ಸ್ಮಾರಕ. ಭದ್ರವಾದ ಗೋಡೆಗಳು, ವಿಶಾಲ ವ್ಯಾಪ್ತಿ ಈ ಕೋಟೆಯ ಶೌರ್ಯವನ್ನು ಸಾರಿ ಹೇಳುತ್ತವೆ.

ರಣಮಂಡಲ ಕೊಂಡ – ರಾಮಾಯಣದ ನೆನಪುಗಳೊಂದಿಗೆ
ಮಂತ್ರಾಲಯದಿಂದ ಸುಮಾರು 52 ಕಿ.ಮೀ ದೂರದಲ್ಲಿರುವ ರಣಮಂಡಲ ಕೊಂಡ ಒಂದು ಪೌರಾಣಿಕ ಮಹತ್ವದ ಕ್ಷೇತ್ರ. ರಾಮಾಯಣದ ಕಾಲದಲ್ಲಿ ಶ್ರೀರಾಮನು ಇಲ್ಲಿ ತಂಗಿ ಸೀತೆಗೆ ನೀರಿನ ವ್ಯವಸ್ಥೆ ಮಾಡಿದನೆಂಬ ನಂಬಿಕೆ ಇದೆ. ರಣಮಂಡಲ ಆಂಜನೇಯ ಸ್ವಾಮಿ ದೇವಾಲಯ ಈ ಸ್ಥಳದ ವಿಶೇಷ ಆಕರ್ಷಣೆ.

ಕರ್ನೂಲ್ ಸಾಯಿ ಬಾಬಾ ದೇವಾಲಯ – ಶಾಂತಿಯ ಸಂಕೇತ
ತುಂಗಭದ್ರಾ ನದಿಯ ದಡದಲ್ಲಿರುವ ಈ ಸಾಯಿ ಬಾಬಾ ದೇವಾಲಯ ನಕ್ಷತ್ರಾಕಾರದ ವಿನ್ಯಾಸದಿಂದಲೇ ಗಮನ ಸೆಳೆಯುತ್ತದೆ. ಬಾಬಾ ಭಕ್ತರಿಗೆ ಇದು ಪ್ರಮುಖ ಧ್ಯಾನಕೇಂದ್ರ.

ಯಾಗಂಟಿ ದೇವಾಲಯ
ಯಾಗಂಟಿ ಶ್ರೀ ಯಾಗಂಟಿಸ್ವಾಮಿ ದೇವಾಲಯ ತನ್ನ ವಿಶಿಷ್ಟತೆಯಿಂದ ಪ್ರಸಿದ್ಧ. ಇಲ್ಲಿ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಅರ್ಧನಾರೀಶ್ವರ ರೂಪದ ದೇವಾಲಯ ಈ ಕ್ಷೇತ್ರದ ವಿಶೇಷತೆ.




