ಮಾತಿನ ಸ್ವಾತಂತ್ರ್ಯ ಕೇವಲ ಹಕ್ಕಾಗಿಯೇ ಉಳಿಯದೆ, ಸಮಾಜದ ಕಣ್ಣು–ಕಿವಿಯಾಗಬೇಕಾದರೆ ಅದಕ್ಕೆ ಮಾಧ್ಯಮ ಬೇಕು. ಸತ್ಯವನ್ನು ಪ್ರಶ್ನಿಸುವ ಧೈರ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ ಮತ್ತು ಜನಸಾಮಾನ್ಯರ ಬದುಕನ್ನು ಅಧಿಕಾರಿಗಳ ಗಮನಕ್ಕೆ ತರುವ ಜವಾಬ್ದಾರಿ ಪತ್ರಿಕೋದ್ಯಮದ್ದು. ಇಂತಹ ಮಹತ್ವದ ಪಾತ್ರವನ್ನು ನೆನಪಿಸಿಕೊಳ್ಳಲು ಪ್ರತಿವರ್ಷ ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಪತ್ರಿಕಾ ದಿನದ ಇತಿಹಾಸ
ಭಾರತೀಯ ಪತ್ರಿಕಾ ದಿನದ ಇತಿಹಾಸವು ಹದಿನೆಂಟನೇ ಶತಮಾನಕ್ಕೆ ಹೋಗಿ ತಲುಪುತ್ತದೆ. 1780ರ ಜನವರಿ 29ರಂದು, ಐರಿಷ್ ಮೂಲದ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕ್ಕಿ ಅವರು ಭಾರತದಲ್ಲಿನ ಮೊದಲ ಪತ್ರಿಕೆಯಾದ “ಹಿಕ್ಕೀಸ್ ಬೆಂಗಾಲ್ ಗೆಜೆಟ್” ಅನ್ನು ಕೋಲ್ಕತ್ತಾದಿಂದ ಪ್ರಕಟಿಸಿದರು. ಇದು ವಾರಪತ್ರಿಕೆಯಾಗಿದ್ದು, ಏಷ್ಯಾದ ಮೊದಲ ಮುದ್ರಿತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರಂಭದಲ್ಲಿ ಈ ಪತ್ರಿಕೆ ಸಾರ್ವಜನಿಕ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಜಾಹೀರಾತುಗಳಿಗೆ ಸೀಮಿತವಾಗಿತ್ತು. ಆದರೆ ಕಾಲಕ್ರಮೇಣ ಹಿಕ್ಕಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಅಧಿಕಾರಿಗಳ ಅನ್ಯಾಯ, ಭ್ರಷ್ಟಾಚಾರ ಹಾಗೂ ನೀತಿಗಳನ್ನು ಧೈರ್ಯವಾಗಿ ಪ್ರಶ್ನಿಸಲು ಮುಂದಾದರು. ಅವರ ನಿಸ್ಸೀಮವಾದ ಬರವಣಿಗೆ ಬ್ರಿಟಿಷ್ ಆಡಳಿತಕ್ಕೆ ಅಸಹನೀಯವಾಯಿತು.
ಇದರ ಪರಿಣಾಮವಾಗಿ, 1782ರಲ್ಲಿ ಬ್ರಿಟಿಷ್ ಸರ್ಕಾರ ಈ ಪತ್ರಿಕೆಯನ್ನು ಮುಚ್ಚುವಂತೆ ಆದೇಶಿಸಿತು. ಅಲ್ಪಾವಧಿಗೆ ಮಾತ್ರ ಪ್ರಕಟವಾದರೂ, ಹಿಕ್ಕೀಸ್ ಬೆಂಗಾಲ್ ಗೆಜೆಟ್ ಭಾರತದ ಸ್ವತಂತ್ರ ಪತ್ರಿಕೋದ್ಯಮಕ್ಕೆ ಬಲವಾದ ಅಡಿಪಾಯ ಹಾಕಿತು.
ಈ ಪತ್ರಿಕೆಯ ಮೂಲಕ ಸತ್ಯವನ್ನು ಧೈರ್ಯವಾಗಿ ಹೇಳುವ ಪತ್ರಿಕೋದ್ಯಮದ ಪರಂಪರೆ ಆರಂಭವಾಯಿತು. ಇದೇ ಕಾರಣದಿಂದ, ಭಾರತದ ಮೊದಲ ಪತ್ರಿಕೆ ಪ್ರಕಟವಾದ ದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಜನವರಿ 29ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.
ಈ ದಿನದ ಮುಖ್ಯ ಉದ್ದೇಶ ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಜನತೆಗೆ ತಿಳಿಸುವುದು. ಮಾಧ್ಯಮಗಳು ಸರ್ಕಾರದ ಒತ್ತಡ, ವ್ಯಾಪಾರಿಕ ಲಾಭ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸತ್ಯ ವರದಿ ಮಾಡಬೇಕು ಎಂಬ ಸಂದೇಶವನ್ನು ಇದು ಸಾರುತ್ತದೆ. ಜೊತೆಗೆ ಪತ್ರಕರ್ತರ ಜವಾಬ್ದಾರಿ, ನೈತಿಕ ಮೌಲ್ಯಗಳು ಮತ್ತು ಸಮಾಜದ ಮೇಲಿನ ಅವರ ಪಾತ್ರವನ್ನು ಚರ್ಚೆಗೆ ತರುವುದೂ ಇದರ ಉದ್ದೇಶ.



