ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಮಲಯಾಳಂ ನಟ ಜಯರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ .
ಇತ್ತೀಚೆಗೆ ಚೆನ್ನೈನ ನಿವಾಸದಲ್ಲಿ ವಿಶೇಷ ತನಿಖಾ ತಂಡ ಅವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಎಷ್ಟು ಬಾರಿ ದೇಗುಲದಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ನಡುವೆ ಯಾವುದಾದರೂ ಹಣಕಾಸಿನ ವಹಿವಾಟು ನಡೆದಿದೆಯಾ? ಉನ್ನಿಕೃಷ್ಣನ್ ಅವರ ಜೊತೆ ನಂಟಿರುವ ಕುರಿತಂತೆ ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಶಬರಿಮಲೆ ಚಿನ್ನ ಕಳವು ಕೇಸ್ ಸಂಬಂಧ ಎರಡು ಪ್ರಕರಣ ದಾಖಲಿಸಿಕೊಂಡು ಎಸ್ಐಟಿ ತನಿಖೆ ನಡೆಸುತ್ತಿದೆ. ಒಂದು ಪ್ರಕರಣ ದ್ವಾರಪಾಲಕ ವಿಗ್ರಹದಲ್ಲಿನ ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದ್ದರೆ, ಮತ್ತೊಂದು ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳ (ಗರ್ಭಗುಡಿಯ ಚಿನ್ನ ಕಳವು) ಕುರಿತಾದ ಪ್ರಕರಣವಾಗಿದೆ.
ಪ್ರಕರಣಗಳ ಸಂಬಂಧ ಬಂಧನಕ್ಕೊಳಗಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಆಡಳಿತ ಅಧಿಕಾರಿಗಳಾದ ಬಿ.ಮುರಾರಿ ಬಾಬು ಮತ್ತು ಎಸ್.ಶ್ರೀಕುಮಾರ್ ಅವರು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಪ್ರಮುಖ ಆರೋಪಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಗೆ ಕೇರಳದ ಕೊಲ್ಲಂನ ವಿಜಿಲೆನ್ಸ್ ನ್ಯಾಯಾಲಯ ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳ ಪ್ರಕರಣದಲ್ಲಿ (ಗರ್ಭಗುಡಿಯ ಚಿನ್ನ ಕಳವು) ಜಾಮೀನು ಸಿಕ್ಕಿದ್ದರೂ, ದೇಗುಲದ ದ್ವಾರಪಾಲಕ ಮೂರ್ತಿಯ ಚಿನ್ನ ಕಳವು ಪ್ರಕರಣದಲ್ಲಿ ಜೈಲಿನಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ.
ಇದುವರೆಗೆ, ಈ ಎರಡು ಪ್ರಕರಣಗಳಲ್ಲಿ ಪೊಟ್ಟಿ ಮತ್ತು ಇಬ್ಬರು ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷರು ಸೇರಿದಂತೆ 12 ಜನರನ್ನು ಎಸ್ಐಟಿ ಬಂಧಿಸಿದೆ.



