ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರದ ಆದ್ಯತೆಗಳನ್ನು ಸ್ಪಷ್ಟವಾಗಿ ಹೊರಹಾಕಿದ್ದಾರೆ. ಕಾರ್ಪೊರೇಟ್ ವಲಯಕ್ಕಿಂತಲೂ ಗ್ರಾಮೀಣ ಭಾರತ, ರೈತರು, ಬಡ ಕುಟುಂಬಗಳು ಹಾಗೂ ಆರೋಗ್ಯ–ಆಹಾರ ಭದ್ರತೆಯ ಮೇಲೆ ಈ ಬಾರಿ ಹೆಚ್ಚು ಗಮನ ಹರಿಸಲಾಗಿದೆ.
ನಾಲ್ಕು ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಭಾರೀ ಮೊತ್ತ ಮೀಸಲಿಡುವ ಮೂಲಕ ಇದು ‘ವೆಲ್ಫೇರ್ ಬಜೆಟ್’ ಎನ್ನುವ ಸಂದೇಶವನ್ನು ಸರ್ಕಾರ ನೀಡಿದೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ VB-G RAM G (ಹಳೆಯ MNREGA)ಗೆ 95,692 ಕೋಟಿ ಅನುದಾನ ಘೋಷಿಸಲಾಗಿದೆ. ಜೊತೆಗೆ ಘಟಕ ವೆಚ್ಚಗಳಿಗೆ ಹೆಚ್ಚುವರಿ 30,000 ಕೋಟಿ ಒದಗಿಸಲಾಗಿದ್ದು, ಹಳ್ಳಿಗಳಲ್ಲಿನ ರಸ್ತೆ, ನೀರಾವರಿ, ಕೆರೆ, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಇದು ನೆರವಾಗಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆಯಲ್ಲಿ ನಗದು ಹರಿವು ಬಲಗೊಳ್ಳಲಿದೆ.
ರೈತರಿಗಾಗಿ ಜಾರಿಯಲ್ಲಿರುವ ಪಿಎಂ-ಕಿಸಾನ್ ಯೋಜನೆಗೆ 63,500 ಕೋಟಿ ಮೀಸಲಿದ್ದು, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೇರ ಹಣಕಾಸು ಭದ್ರತೆ ಮುಂದುವರಿಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ 9,500 ಕೋಟಿ ಹಂಚಿಕೆ ಮಾಡಲಾಗಿದೆ. ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆಯ ಭರವಸೆ ಇದರಿಂದ ಮತ್ತಷ್ಟು ಬಲವಾಯಿತು.
ಆಹಾರ ಭದ್ರತೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗೆ 2.27 ಲಕ್ಷ ಕೋಟಿ ವೆಚ್ಚ ನಿಗದಿಪಡಿಸಲಾಗಿದೆ. ಈ ಮೂಲಕ 2026ರ ಬಜೆಟ್ ಹಳ್ಳಿಗಳು ಮತ್ತು ಬಡವರ ಹಿತದೃಷ್ಟಿಯನ್ನೇ ಕೇಂದ್ರಬಿಂದುವಾಗಿ ಹೊಂದಿದೆ.



