ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಷಣಾರ್ಧದಲ್ಲಿ ಜೀವನವೇ ಬದಲಾಗಬಹುದು ಎಂಬುದಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಉದಾಹರಣೆಯಾಗಿದ್ದಾರೆ. ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಅವರು ಅಚಾನಕ್ ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡಕ್ಕೆ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡು ಹೊರಬಿದ್ದ ಹಿನ್ನೆಲೆ, ಬಿಸಿಸಿಐ ತುರ್ತಾಗಿ ಪರ್ಯಾಯ ಆಟಗಾರರ ಹುಡುಕಾಟ ಆರಂಭಿಸಿತು. ಈ ವೇಳೆ ಸಿರಾಜ್ ಹೆಸರು ಮುಂದಕ್ಕೆ ಬಂದಿದ್ದು, ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕರೆ ಮಾಡಿ ಆಯ್ಕೆ ವಿಚಾರ ತಿಳಿಸಿದಾಗ ಮೊದಲು ಇದು ತಮಾಷೆ ಎಂದು ಸಿರಾಜ್ ಭಾವಿಸಿದ್ದರಂತೆ.
ಅಂದು ಸಿರಾಜ್ ಕುಟುಂಬದೊಂದಿಗೆ ಮನೆಯಲ್ಲಿದ್ದು, ಸ್ಪೇನ್ ಪ್ರವಾಸಕ್ಕೆ ಹೋಗಲು ಟಿಕೆಟ್ಗಳನ್ನೂ ಬುಕ್ ಮಾಡಿದ್ದರು. ಫುಟ್ಬಾಲ್ ಅಭಿಮಾನಿಯಾಗಿರುವ ಅವರು ರಿಯಲ್ ಮ್ಯಾಡ್ರಿಡ್ ಪಂದ್ಯ ವೀಕ್ಷಿಸಲು ಯೋಜಿಸಿದ್ದರಂತೆ.
ಸುಮಾರು 19 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ಸಿರಾಜ್, ಯುಎಸ್ಎ ವಿರುದ್ಧದ ಪಂದ್ಯದಲ್ಲಿ 4 ಓವರ್ನಲ್ಲಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಬುಮ್ರಾಗೆ ಜ್ವರ ಬಂದ ಕಾರಣ ಸಿರಾಜ್ಗೆ ಅವಕಾಶ ದೊರಕಿದ್ದು, ಅದನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ.



