ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವಾಡಲು ಹಿಂದೇಟು ಹಾಕುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸುವ ಮೂಲಕ ಹೊಸ ತಿರುವು ನೀಡಿದೆ.
ಫೆಬ್ರವರಿ 15ರಂದು ಕೊಲಂಬೋದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಇದಕ್ಕೆ ಕಠಿಣ ಎಚ್ಚರಿಕೆ ನೀಡಿದ್ದ ಐಸಿಸಿ, ಬಹಿಷ್ಕಾರದ ಪರಿಣಾಮಗಳು ಭೀಕರವಾಗಿರಲಿವೆ ಎಂದು ಪಿಸಿಬಿಗೆ ತಿಳಿಸಿತ್ತು. ಈ ಎಚ್ಚರಿಕೆಯ ನಂತರ ದಾರಿಗೆ ಬಂದಂತಿರುವ ಪಿಸಿಬಿ, ಪಂದ್ಯವಾಡಲು ಒಪ್ಪುವ ಸೂಚನೆ ನೀಡಿದೆಯಾದರೂ ಮೂರು ಷರತ್ತುಗಳನ್ನು ವಿಧಿಸಿದೆ.
ಪಿಸಿಬಿಯ ಮೂರು ಪ್ರಮುಖ ಬೇಡಿಕೆಗಳು:
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು.
ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದರೂ ಬಾಂಗ್ಲಾದೇಶಕ್ಕೆ ಭಾಗವಹಿಸುವಿಕೆಯ ಶುಲ್ಕವನ್ನು ನೀಡಬೇಕು.
ಭವಿಷ್ಯದ ಐಸಿಸಿ ಟೂರ್ನಿಗಳನ್ನು ಆಯೋಜಿಸುವ ಹಕ್ಕನ್ನು ತಮಗೆ ನೀಡಬೇಕು.
ಈ ಸಭೆಗೆ ಪಿಸಿಬಿ ಅಧಿಕಾರಿಗಳು ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರನ್ನೂ ಆಹ್ವಾನಿಸಿದ್ದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:
ಪಂದ್ಯವಾಡಲು ಕೆಲವು ಅಧಿಕಾರಿಗಳು ಸಮ್ಮತಿಸಿದ್ದರೂ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಾತ್ರ ಇನ್ನೂ ಹಠ ಹಿಡಿದಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವರು ಇಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಹಿಂದೆ ಪ್ರಧಾನಿ ಷರೀಫ್ ಅವರು “ಭಾರತದ ವಿರುದ್ಧ ಆಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರೂ, ಐಸಿಸಿಗೆ ಈವರೆಗೆ ಯಾವುದೇ ಅಧಿಕೃತ ಪತ್ರ ರವಾನೆಯಾಗಿಲ್ಲ. ಹೀಗಾಗಿ ಇಂದಿನ ಸಭೆಯ ನಂತರ ಪಾಕಿಸ್ತಾನದ ಅಂತಿಮ ನಿರ್ಧಾರ ಏನೆಂಬುದು ತಿಳಿಯಲಿದೆ.



