ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸವು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ‘ಅಧಿಕಾರ ಹಂಚಿಕೆ’ಯ ಚರ್ಚೆ ಕಾವು ಪಡೆದಿದೆ. ಹೈಕಮಾಂಡ್ ಭೇಟಿಯಿಂದ ದೊಡ್ಡ ಮಟ್ಟದ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಡಿಕೆಶಿ ಪಾಳಯಕ್ಕೆ ಈ ಬಾರಿ ಕೇವಲ ಅಸ್ಸಾಂ ಚುನಾವಣೆ ಕುರಿತ ಚರ್ಚೆಗಳಷ್ಟೇ ದಕ್ಕಿವೆ. ಇದರಿಂದಾಗಿ ‘ಗುಡ್ ನ್ಯೂಸ್’ ಕಾಯುತ್ತಿದ್ದ ಬೆಂಬಲಿಗ ಶಾಸಕರಲ್ಲಿ ಮತ್ತೆ ನಿರಾಸೆ ಮೂಡಿದೆ.
ಒಂದೆಡೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಬಜೆಟ್ ಮಂಡನೆಗೂ ಮುನ್ನವೇ ಅಧಿಕಾರ ಹಸ್ತಾಂತರದ ಸ್ಪಷ್ಟ ಚಿತ್ರಣ ಸಿಗಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಸಿಎಂ ಅವರ ಆಡಳಿತಾತ್ಮಕ ಬಿಗು ಹಿಡಿತವು ಅಧಿಕಾರ ಹಂಚಿಕೆಯ ಸೂತ್ರವನ್ನು ಮತ್ತಷ್ಟು ಜಟಿಲಗೊಳಿಸಿದೆ.
ದೆಹಲಿಯ ರಾಜತಾಂತ್ರಿಕ ಮಾತುಕತೆಗಳ ನಂತರ ಡಿಕೆಶಿ ಅವರು ಇಂದು ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ತೆರಳುತ್ತಿದ್ದಾರೆ. ಅಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ದೈವಬಲಕ್ಕಾಗಿ ಪ್ರಾರ್ಥಿಸಲಿದ್ದಾರೆ.



