ಹೊಸದಿಗಂತ ಡಿಜಿಟಲ್ ಡೆಸ್ಕ್: :
ಪುಣೆಯ ಬಾರಾಮತಿಯಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ವಿಮಾನ ಅಪಘಾತದ ತನಿಖೆ ಪೂರ್ಣಗೊಳ್ಳುವವರೆಗೆ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಎನ್ಸಿಪಿ (ಶರದ್ ಪವಾರ್) ಶಾಸಕ ರೋಹಿತ್ ಪವಾರ್ ಬುಧವಾರ ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿವಂಗತ ಎನ್ಸಿಪಿ ನಾಯಕನ ಸೋದರಳಿಯ ಶಾಸಕ, ನಾಗರಿಕ ವಿಮಾನಯಾನ ಸಚಿವರು ಮತ್ತು ಅವರ ತೆಲುಗು ದೇಶಂ ಪಕ್ಷವು ವಿಎಸ್ಆರ್ ಕಂಪನಿ ಮಾಲೀಕರಿಗೆ ಹತ್ತಿರ. ಹೀಗಾಗಿ ಬಾರಾಮತಿಯಲ್ಲಿ ಎನ್ಸಿಪಿ ನಾಯಕನನ್ನು ಹೊತ್ತೊಯ್ಯುತ್ತಿದ್ದ ಲಿಯರ್ಜೆಟ್ ವಿಮಾನ ಅಪಘಾತಕ್ಕೀಡಾದ ವಿಎಸ್ಆರ್ ಕಂಪನಿಯನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಾಯ್ಡು ನೈತಿಕ ಆಧಾರದ ಮೇಲೆ ನಾಗರಿಕ ವಿಮಾನಯಾನ ಸಚಿವರಾಗಿ ಮುಂದುವರಿಯಬಾರದು. ಇಲ್ಲಿಯವರೆಗೆ ಪ್ರಾಥಮಿಕ ತನಿಖಾ ವರದಿಯೇ ಬಂದಿಲ್ಲ. ಈ ನಡುವೆ ವಿಎಸ್ಆರ್ ಕಂಪನಿ ಉಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಚಿಕ್ಕಮ್ಮ ಮತ್ತು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಸೇರಿದಂತೆ ಎನ್ಸಿಪಿ ನಾಯಕತ್ವವು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಜನವರಿ 28 ರಂದು ಅಜಿತ್ ಪವಾರ್ ಸಾವನ್ನಪ್ಪಿದ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಪವಾರ್ ಹೇಳಿದ್ದಾರೆ.



