ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಐ ಇಂಪ್ಯಾಕ್ಟ್ ಶೃಂಗಸಭೆಯ ದೆಹಲಿ ಘೋಷಣೆಗಳನ್ನು ಅಮೆರಿಕ, ಇಂಗ್ಲೆಂಡ್, ಚೀನಾ ಮತ್ತು ಫ್ರಾನ್ಸ್ ಸೇರಿದಂತೆ 88 ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಅಂಗೀಕರಿಸುವ ಮೂಲಕ ವಿದ್ಯುಕ್ತ ತೆರೆ ಕಂಡಿತು.
“ಸರ್ವಜನ ಹಿತಾಯ, ಸರ್ವಜನ ಸುಖಾಯ” (ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ಸಂತೋಷ) ತತ್ವದಡಿ ಆರಂಭಗೊಂಡ ಶೃಂಗಸಭೆ,ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತಿಗಾಗಿ AI ಅನ್ನು ಬಳಸಿಕೊಳ್ಳುವ ಜಾಗತಿಕ ಒಮ್ಮತ ವ್ಯಕ್ತಪಡಿಸಿತು.
ಅಂತಾರಾಷ್ಟ್ರೀಯ ಸಹಕಾರ ಮತ್ತು ಬಹುಪಾಲುದಾರರ ತೊಡಗಿಸಿಕೊಳ್ಳುವಿಕೆ,ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸುವುದು ಸುಲಭ ಮತ್ತು ವಿಶ್ವಾಸಾರ್ಹ ಬಳಕೆಗೆ ಸಾಧ್ಯವಾಗಿಸುವುದು ಘೋಷಣೆಯ ಮೂಲ ಉದ್ದೇಶವಾಗಿದೆ.
ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಅವರು, ದೆಹಲಿ ಘೋಷಣೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಇಡೀ ಜಗತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾನವ ಕೇಂದ್ರಿತ ಎಐ ದೃಷ್ಟಿಕೋನವನ್ನು ಅನುಮೋದಿಸಿದೆ ಎಂದು ತಿಳಿಸಿದರು.
ವಿಶ್ವಾದ್ಯಂತ ಕೃತಕ ಬುದ್ಧಿಮತ್ತೆಯ ಸಮಗ್ರ, ಸುರಕ್ಷಿತ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಘೋಷಣೆಯನ್ನು ಶೃಂಗಸಭೆಯಲ್ಲಿನ ನಾಯಕರು ಅಂಗೀಕರಿಸಿದ್ದಾರೆ. ಹೀಗಾಗಿ, ಎಲ್ಲ ದೇಶಗಳು ಜನರ ಪ್ರಯೋಜನಕ್ಕಾಗಿ AI ಅನ್ನು ಅಭಿವೃದ್ಧಿಪಡಿಸಲಿವೆ ಎಂದರು.



