ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಚೊಕ್ಕಹಳ್ಳಿ ಬಳಿ ಆಯೋಜಿಸಲಾಗಿದ್ದ ಬೃಹತ್ ‘ಕಂದಾಯ ಸೇವೆಗಳ ಸಮರ್ಪಣಾ ಮತ್ತು ಸವಲತ್ತುಗಳ ವಿತರಣಾ ಸಮಾವೇಶ’ಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು.
ಜಿಲ್ಲೆಯ ಸುಮಾರು 25 ಸಾವಿರಕ್ಕೂ ಹೆಚ್ಚು ಜನರಿಗೆ ವಿವಿಧ ಕಂದಾಯ ಸವಲತ್ತುಗಳನ್ನು ಸ್ಥಳದಲ್ಲೇ ವಿತರಿಸಲಾಯಿತು. ಹತ್ತಾರು ವರ್ಷಗಳಿಂದ ಪೌತಿ ಖಾತೆ (ವಂಶಪಾರಂಪರ್ಯ ಹಕ್ಕು ಬದಲಾವಣೆ) ಮಾಡಿಸಿಕೊಳ್ಳಲಾಗದೆ ಅಲೆದಾಡುತ್ತಿದ್ದ ಸಾರ್ವಜನಿಕರಿಗೆ ಈ ಸಮಾವೇಶದಲ್ಲಿ ದೊಡ್ಡ ಮಟ್ಟದ ಪರಿಹಾರ ಒದಗಿಸಲಾಯಿತು.
ನೂರಾರು ಜನರಿಗೆ ಕಂದಾಯ ಗ್ರಾಮಗಳ ಅಧಿಕೃತ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅವರ ಆಸ್ತಿ ಹಕ್ಕನ್ನು ಖಾತರಿಪಡಿಸಲಾಯಿತು.
“ಸರ್ಕಾರಿ ಸವಲತ್ತುಗಳು ಜನಸಾಮಾನ್ಯರಿಗೆ ಸುಲಭವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ಬೃಹತ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ದಶಕಗಳ ಕಾಲದ ಭೂ ದಾಖಲೆಗಳ ಸಮಸ್ಯೆಯನ್ನು ನಾವು ಬಗೆಹರಿಸುತ್ತಿದ್ದೇವೆ,” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.



