ಹೊಸದಿಗಂತ ಡಿಜಿಟಲ್ ಡೆಸ್ಕ್
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸುಪ್ರೀಂ ಲೀಡರ್ ಅಲಿ ಖಮೇನಿ ನಿಧನರಾಗಿದ್ದಾರೆ ಎಂಬ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ಆತಂಕ ಮತ್ತು ಶೋಕದ ವಾತಾವರಣ ನಿರ್ಮಿಸಿದೆ.
ರಾಜ್ಯದಲ್ಲಿ ‘ಪುಟ್ಟ ಇರಾನ್’ ಎಂದೇ ಖ್ಯಾತಿ ಪಡೆದಿರುವ ಅಲೀಪುರ ಗ್ರಾಮವು ಖಮೇನಿ ಅವರ ಸಾವಿನ ಸುದ್ದಿಯಿಂದ ಸಂಪೂರ್ಣ ಮೌನಕ್ಕೆ ಶರಣಾಗಿದೆ. ಗ್ರಾಮದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದ್ದು, ಇಡೀ ಗ್ರಾಮವೇ ಬಂದ್ ಆಗಿದೆ. ನೆಚ್ಚಿನ ನಾಯಕನ ಅಗಲಿಕೆಯ ಗೌರವಾರ್ಥವಾಗಿ ಗ್ರಾಮಸ್ಥರು ಸತತ 3 ದಿನಗಳ ಕಾಲ ‘ಕರಾಳ ದಿನ’ ಆಚರಿಸಲು ನಿರ್ಧರಿಸಿದ್ದಾರೆ.
ಅಲೀಪುರ ಮತ್ತು ಅಲಿ ಖಮೇನಿ ಅವರ ನಡುವೆ ದಶಕಗಳ ಕಾಲದ ಭಾವನಾತ್ಮಕ ಸಂಬಂಧವಿದೆ. 1986ರಲ್ಲಿ ಖಮೇನಿ ಅವರು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಗ್ರಾಮದಲ್ಲಿ ಅವರ ಹೆಸರಿನಲ್ಲೇ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದೆ. ಇಲ್ಲಿನ ಜನರಿಗೆ ಖಮೇನಿ ಕೇವಲ ಒಬ್ಬ ನಾಯಕನಲ್ಲ, ಬದಲಾಗಿ ಪೂಜನೀಯ ವ್ಯಕ್ತಿಯಾಗಿದ್ದರು.
ಅಲೀಪುರದ ಅನೇಕ ಕುಟುಂಬಗಳ ಸದಸ್ಯರು ಪ್ರಸ್ತುತ ಇರಾನ್ನಲ್ಲಿ ಧಾರ್ಮಿಕ ಶಿಕ್ಷಣ ಹಾಗೂ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇರಾನ್ನಲ್ಲಿ ಯುದ್ಧದ ಭೀತಿ ಎದುರಾದಾಗಲೆಲ್ಲಾ ಇಲ್ಲಿನ ಜನರಲ್ಲಿ ತಮ್ಮವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮನೆಮಾಡುತ್ತದೆ. ಸದ್ಯದ ಪರಿಸ್ಥಿತಿಯಿಂದಾಗಿ ಅಲೀಪುರದ ಜನರು ಕಣ್ಣೀರು ಹಾಕುತ್ತಿದ್ದು, ತಮ್ಮ ಆತ್ಮೀಯರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.



