ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ‘ಒಳ ಮೀಸಲಾತಿ’ಯನ್ನು ಕಡ್ಡಾಯವಾಗಿ ಪರಿಗಣಿಸಬೇಕು. ನ್ಯಾಯಾಲಯದ ನೆಪ ಹೇಳಿ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಬಿಜೆಪಿ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ. 50 ರಿಂದ ಶೇ. 56ಕ್ಕೆ ಏರಿಸಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದೆ. ಈಗಿನ ಸರ್ಕಾರವು ಇದೇ ಆಧಾರದ ಮೇಲೆ ನೇಮಕಾತಿ ನಡೆಸಬೇಕು.
“ಮುಖ್ಯಮಂತ್ರಿಗಳೇ, ಎಸ್ಸಿ/ಎಸ್ಟಿ ಸಮುದಾಯಗಳ ಮೇಲೆ ನಿಮಗೆ ನಿಜವಾದ ಕಾಳಜಿ ಇದ್ದರೆ ನ್ಯಾಯಾಲಯದ ಕುಂಟುನೆಪ ಹೇಳುವುದನ್ನು ನಿಲ್ಲಿಸಿ. ಕೂಡಲೇ ಒಳ ಮೀಸಲಾತಿ ಅನ್ವಯಿಸಿ ಉದ್ಯೋಗ ನೀಡಿ,” ಎಂದು ಅವರು ಒತ್ತಾಯಿಸಿದರು.
ಹಳೆಯ ಮೀಸಲಾತಿ ಪದ್ಧತಿಯಲ್ಲೇ ನೇಮಕಾತಿ ಮುಂದುವರಿಸಲು ಹೊರಟಿರುವ ಸರ್ಕಾರದ ನಿರ್ಧಾರವು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ದಾರಿ ಮಾಡಿಕೊಟ್ಟಂತಿದೆ. ಇದು “ತೊಟ್ಟಿಲು ತೂಗಿ ಮಗು ಚಿವುಟುವ” ಕೆಲಸ ಎಂದು ಅವರು ಟೀಕಿಸಿದರು.



