March 4, 2026
Wednesday, March 4, 2026
spot_img

ದಕ್ಷಿಣ ಕನ್ನಡದಲ್ಲಿ ವಿಲಕ್ಷಣ ಘಟನೆ: ನೇತ್ರಾವತಿ ನದಿ ತೀರದಲ್ಲಿ ಕಾಣಸಿಕ್ಕಿತು ಆಧಾರ್ ಕಾರ್ಡ್‌ಗಳ ರಾಶಿ!

ಹೊಸದಿಗಂತ ವರದಿ, ಬಂಟ್ವಾಳ :

ಬಂಟ್ವಾಳದ ಪುದು ಗ್ರಾಮದ ಹತ್ತನೇ ಮೈಲ್‌ಕಲ್ಲು ಸಮೀಪ ನೇತ್ರಾವತಿ ನದಿ ತೀರದಲ್ಲಿ ಸ್ಥಳೀಯ ನಿವಾಸಿಗಳ ವಿಳಾಸ ಹೊಂದಿರುವ ನೂರಾರು ಆಧಾರ್ ಕಾರ್ಡ್‌ಗಳ ರಾಶಿ ಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು,ಈ ವಿದ್ಯಮಾನ ಸ್ಥಳೀಯವಾಗಿ ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮಂಗಳವಾರ ಸಂಜೆ ನದಿಯಲ್ಲಿ ತೇಲಿ ಬರುತ್ತಿದ್ದ ಆಧಾ‌ರ್ ಕಾರ್ಡ್‌ಗಳನ್ನು ಗಮನಿಸಿದ ಸ್ಥಳೀಯರು ಈ ಮಾಹಿತಿಯನ್ನು ಸಂಬಂಧಿಸಿದವರಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಹಲವರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದು, ಪುದು ಗ್ರಾಮದ ಹಲವಾರು ಮನೆಗಳ ವಿಳಾಸ ಹೊಂದಿರುವ ಕಾರ್ಡ್‌ಗಳು ನದಿ ಬದಿಯಲ್ಲಿ ಪತ್ರೆಯಾಗಿದೆಯೆನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಈಬಗ್ಗೆ ಸ್ಥಳೀಯರು ಕರೆ ಮಾಡಿ ತಿಳಿಸಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನೂರಾರು ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿದ್ದು,ಇದೊಂದು ಗಂಭೀರ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸಾರ್ವಜನಿಕರು ಹಣ ನೀಡಿ ಸೈಬರ್ ಕೇಂದ್ರಗಳಿಂದ ಪ್ರತಿಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ವಿಚಾರದ ಕುರಿತಂತೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉನ್ನತಾಧಿಕಾರಿಗಳು ಹಾಗೂ. ಸ್ಥಳೀಯ ಶಾಸಕರಿಗೂ ಗ್ರಾಮ ಪಂಚಾಯತ್ ವತಿಯಿಂದ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !