ಹೊಸದಿಗಂತ ವಿಜಯನಗರ
ವಿಜಯನಗರದ ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ನೀರಿನ ಸಂಗ್ರಹಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಾಶಯದ ಅಭಿವೃದ್ಧಿ ಹಾಗೂ ಆಧುನೀಕರಣದ ಕುರಿತು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.
ಜಲಾಶಯದ ಶಿಥಿಲಗೊಂಡಿರುವ ಎಲ್ಲಾ 33 ಗೇಟುಗಳನ್ನು ಮುಂಬರುವ ಮುಂಗಾರು ಮಳೆ ಆರಂಭವಾಗುವ ಮೊದಲೇ ಬದಲಾಯಿಸಿ, ಹೊಸ ಗೇಟುಗಳನ್ನು ಅಳವಡಿಸಲು ಸರ್ಕಾರ ಕಾಲಮಿತಿ ನಿಗದಿಪಡಿಸಿದೆ.
ತುಂಗಭದ್ರಾದಲ್ಲಿ ಹೂಳು ತುಂಬಿರುವ ಸಮಸ್ಯೆಗೆ ಪರಿಹಾರವಾಗಿ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಿಸಲು ಚಿಂತನೆ ನಡೆಸಲಾಗಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ಸಮಾಲೋಚನೆ ನಡೆಸಿ, ತುಂಗಭದ್ರಾ ಮಂಡಳಿಯ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು.
ಹತ್ತಿಕುಣಿ ಹಾಗೂ ತುಂಗಭದ್ರಾ ಎಡದಂಡೆ ಶಾಖಾ ಕಾಲುವೆಯ ವ್ಯಾಪ್ತಿಯ 4,745 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸದ್ಬಳಕೆಗಾಗಿ ಆಧುನಿಕ ಪೈಪ್ಲೈನ್ ಮಾದರಿಯ ನೀರಾವರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.



