ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲ ಆರ್ ಎನ್ ರವಿ ಅವರ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಕಿಡಿಕಾರಿದ್ದು,ಅವರನ್ನು “ಬಿಜೆಪಿ ಕೇಡರ್” ಎಂದು ಕರೆದಿದ್ದಾರೆ.
ಎಸ್ಐಆರ್ ವಿರೋಧಿಸಿ ಶುಕ್ರವಾರದಿಂದ ಟಿಎಂಸಿ ಧರಣಿ ನಡೆಸುತ್ತಿದ್ದು, ಎರಡನೇ ದಿನವಾದ ಇಂದು,ಸಿಎಂ ಮಾತನಾಡುತ್ತಾ , ಸಿ ವಿ ಆನಂದ ಬೋಸ್ ಅವರ ಹಠಾತ್ ರಾಜೀನಾಮೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸೃಷ್ಟಿಸಿದೆ ಒತ್ತಡ ಕಾರಣ ಎಂದು ಆರೋಪಿಸಿದರು.
ಏಪ್ರಿಲ್ನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಲೋಕಭವನವನ್ನು ರಾಜಕೀಯ ನೆಲೆಯಾಗಿ ಪರಿವರ್ತಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಿಮಗೆ ಗೊತ್ತಾ ಸಿ ವಿ ಆನಂದ ಬೋಸ್ ಅವರನ್ನು ಹೇಗೆ ತೆಗೆದುಹಾಕಲಾಯಿತು ಎಂದು? ನನಗೆ ಗೊತ್ತು, ಅವರಿಗೆ ಬೆದರಿಕೆ ಹಾಕಲಾಯಿತು. ಲೋಕ ಭವನದಿಂದ ಹಣ ವಿತರಿಸಲು ಬಯಸುತ್ತಾರೆ. ಲೋಕ ಭವನವನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಬೇಕೆಂದು ಅವರು ಬಯಸುತ್ತಾರೆ. ಆದರೆ ದೆಹಲಿಯ ಅಂತಹ ಹುಚ್ಚಾಟಿಕೆಗಳಿಗೆ ಎಲ್ಲರೂ ಒಪ್ಪುವುದಿಲ್ಲ ಎಂದು ಮಮತಾ ಆರೋಪಿಸಿದರು.
ಹೊಸ ರಾಜ್ಯಪಾಲ ರವಿ ಅವರು, ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಹೇಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಟೀಕಿಸಿದರು.



