ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿರುದ್ಯೋಗಿಗಳಿಗೆ ಶನಿವಾರ ಭರ್ಜರಿ ಗಿಫ್ಟ್ ನೀಡಿದ್ದು, 10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಈ ಘೋಷಣೆ ಮಹತ್ವವನ್ನು ಪಡೆದಿದೆ.
SIR ವಿರೋಧಿಸಿ ನಡೆದ ಧರಣಿಯಲ್ಲಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ , ಈ ನಿರುದ್ಯೋಗ ಭತ್ಯೆ ಏಪ್ರಿಲ್ನಲ್ಲಿ ಆರಂಭವಾಗಬೇಕಿತ್ತು. ಆದರೆ ತಕ್ಷಣದಿಂದಲೇ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ.
ಏಪ್ರಿಲ್ 1ರಂದು ಹಣವನ್ನು ನೀಡಲಾಗುವುದು ಎಂದು ನಾವು ಮೊದಲೇ ಹೇಳಿದ್ದೆವು. ಆದರೆ ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನವಾದ್ದರಿಂದ, ಉಡುಗೊರೆಯಾಗಿ ನಾವು ಪಾವತಿ ದಿನಾಂಕವನ್ನು ಏಪ್ರಿಲ್ 1ರ ಬದಲು ಮಾರ್ಚ್ 7ಕ್ಕೆ ಬದಲಾಯಿಸಿದ್ದೇವೆ. ಯುವ ಸಾಥಿ ಅಡಿಯಲ್ಲಿ ಇನ್ನೂ ಓದುತ್ತಿರುವ ಮತ್ತು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಯಾವುದೇ ಯೋಜನೆಗಳ ಫಲಾನುಭವಿಗಳು ಆಗಿಲ್ಲದ ಎಲ್ಲರಿಗೂ ಮೊತ್ತ ಲಭಿಸಲಿದೆ ಎಂದು ತಿಳಿಸಿದರು.
21ರಿಂದ 40 ವರ್ಷ ವಯಸ್ಸಿನವರೆಲ್ಲರೂ, ಸುಮಾರು 1 ಕೋಟಿ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇವರು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲ ಎಂದು ಹೇಳಿದರು.



