ಹೊಸದಿಗಂತ ಬೀದರ್:
ತೆಲಂಗಾಣದಿಂದ ಮಹಾರಾಷ್ಟ್ರದತ್ತ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣದ ನಾರಾಯಣಖೇಡ್ನಿಂದ ಮಹಾರಾಷ್ಟ್ರದ ಮುಂಬೈಗೆ ಬೈಕ್ ಮೂಲಕ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾರ್ಚ್ 9ರಂದು ತಾಲೂಕಿನ ಗಡಿ ಗ್ರಾಮವಾದ ಜಂಬಗಿಯಿಂದ ಸೋರಳ್ಳಿ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ.
ಜಪ್ತಿಯಾದ ಸ್ವತ್ತುಗಳು:
ಗಾಂಜಾ: 30.950 ಕೆ.ಜಿ. (ಅಂದಾಜು ಮೊತ್ತ ₹19.47 ಲಕ್ಷ)
ವಾಹನ: ಸಾಗಾಟಕ್ಕೆ ಬಳಸಿದ್ದ ಒಂದು ಬೈಕ್ (ಅಂದಾಜು ಮೊತ್ತ ₹30 ಸಾವಿರ)
ಒಟ್ಟು ಮೌಲ್ಯ: ಸುಮಾರು ₹19.77 ಲಕ್ಷ
ಬಂಧಿತ ಆರೋಪಿಗಳನ್ನು ತೆಲಂಗಾಣದ ನಾರಾಯಣಖೇಡ್ ತಾಲೂಕಿನ ಮೂಲದ ಪವನ್ ನಾರಾಯಣ ಚವ್ಹಾಣ್ ಮತ್ತು ಕಿಶನ್ ಲಕ್ಷ್ಮಣ ರಾಠೋಡ್ ಎಂದು ಗುರುತಿಸಲಾಗಿದೆ. ಲಾಭದ ಆಸೆಗೆ ಬಿದ್ದು ಮುಂಬೈನಲ್ಲಿ ಮಾರಾಟ ಮಾಡಲು ಇವರು ಈ ಪ್ಲಾನ್ ಮಾಡಿದ್ದರು ಎಂದು ತಿಳಿದುಬಂದಿದೆ.



