ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇದೇ ಜನವರಿ 28 ರಂದು ಮಹಾರಾಷ್ಟ್ರ ಮಾಜಿ ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾಗಿದ್ದ ಪುಣೆಯ ಬಾರಾಮತಿಯ ವಿಮಾನ ದುರಂತದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಈ ವಿಮಾನ ಹಾರಾಟಕ್ಕೆ ಸೂಕ್ತವಲ್ಲ ಎಂದು ಅಮೆರಿಕದಿಂದ ನಿವೃತ್ತಿ ಪಡೆದಿತ್ತು. ಆದರೂ ಅದನ್ನು ಮತ್ತೆ ಬಳಸಿಕೊಳ್ಳಲಾಗಿದೆ. ವಿಮಾನದ ಸುರಕ್ಷಿತ ಹಾರಾಟದ ಮಿತಿ 5000 ಗಂಟೆ ಆಗಿದ್ದರೂ ಸುಮಾರು 8000 ಗಂಟೆಗಳ ಕಾಲ ಅದು ಹಾರಾಟ ನಡೆಸಿದೆ. ಇದಲ್ಲದೆ ಹಿಂದೊಮ್ಮೆ ವಿಮಾನದ ಪೈಲಟ್ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿದ್ದರೂ ಅವರನ್ನೇ ಮತ್ತೆ ಪೈಲೆಟ್ ಆಗಿ ನೇಮಿಸಿಕೊಳ್ಳಾಗಿದೆ. ಇವೆಲ್ಲವುಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾಗಿ ವಿಮಾನ ದುರಂತವು ಉದ್ದೇಶಪೂರ್ವಕ ಸಂಚೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಜಿತ್ ಪವಾರ್ ಅವರು ಆ ದಿನ ಬಾರಾಮತಿಗೆ ರಸ್ತೆ ಮೂಲಕ ಪ್ರಯಾಣಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ವಿಮಾನದಲ್ಲಿ ಪ್ರಯಾಣ ನಡೆಸುವ ನಿರ್ಧಾರ ಯಾರದ್ದು? ಎಂಬುದು ಕೂಡಾ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.



