ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದ್ದು, ಗಂಡ ಹೆಂಡತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಶಿವಮೊಗ್ಗದ ಭದ್ರಾವತಿ ತಾಲೂಕಿನ ಎಚ್ಕೆ ಜಂಕ್ಷನ್ ಬಳಿ ಅಪಘಾತ ಸಂಭವಿಸಿದೆ. ಬಾಬು (30) ಹಾಗೂ ಸಾವಿತ್ರಿ (26) ಮೃತರು.
ತರಿಕೆರೆ ತಾಲೂಕಿನ ಅರವನಹಳ್ಳಿಯ ಗೌಳಿಗೆರೆ ಕ್ಯಾಂಪ್ ನಿವಾಸಿಗಳಾದ ಇವರು ಶಿವಮೊಗ್ಗದ ಫುಡ್ ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಫುಡ್ ಕೋರ್ಟ್ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಹುಣಸೆಘಟ್ಟ ಜಂಕ್ಷನ್ನಿಂದ ಶಂಕರಘಟ್ಟ ಕಡೆ ಹೋಗುವಾಗ ರಸ್ತೆಯಲ್ಲಿ ಲೋಡ್ ತುಂಬಿದ ಲಾರಿಯೊಂದು ಇವರ ಬೈಕ್ ಮುಂದೆ ಸಾಗುತ್ತಿತ್ತು.
ಅಲ್ಲಿ ರಸ್ತೆ ಸ್ವಲ್ಪ ಎತ್ತರವಿದ್ದು, ಲಾರಿ ನಿಧಾನವಾಗಿ ಚಲಿಸಲು ಆರಂಭಿಸಿದೆ. ಆಗ ವೇಗದಲ್ಲಿದ್ದ ಬೈಕ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದು, ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.



