ಹೊಸದಿಗಂತ ವರದಿ, ಬೆಂಗಳೂರು :
ದ್ವಿತೀಯ ಪಿಯುಸಿ ಫಲಿತಾಂಶ ಈ ಮೊದಲು ನಿಗದಿಯಾಗಿದ್ದಂತೆ ಏ.7 ರಂದು ಪ್ರಕಟವಾಗುತ್ತಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ ಇಎಬಿ) ಯ ಅಧಿಕೃತ ಮೂಲಗಳು ಖಚಿತಪಡಿಸಿವೆ.
ಕಳೆದ ಫೆ.28 ರಿಂದ ಮಾ.17ರವರೆಗೆ ನಡೆದಿದ್ದ ಪಿಯು ಪರೀಕ್ಷೆಗೆ ರಾಜ್ಯಾದ್ಯಂತ 7,10, 363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅಲ್ಲದೇ, ಈ ಮೊದಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏ.7 ರಂದು ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದರು.
ಫಲಿತಾಂಶ ಪ್ರಕಟಿಸಲು ಮಂಡಳಿಯು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗ ಈವರೆಗೆ ಒಪ್ಪಿಗೆ ನೀಡದಿರುವುದರಿಂದ ಫಲಿತಾಂಶ ಪ್ರಕಟ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಲು ಅನುಮತಿ ನೀಡುವಂತೆ ಪರೀಕ್ಷಾ ಮಂಡಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಯೋಗವು ಇಲ್ಲಿಯವರೆಗೂ ಫಲಿತಾಂಶದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆಯೋಗ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ಫಲಿತಾಂಶ ಪ್ರಕಟಣೆಯ ದಿನಾಂಕದ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸದ್ಯಕ್ಕೆ ಏ.7ಕ್ಕೆ ಫಲಿತಾಂಶ ನೀಡಲಾಗುತ್ತಿಲ್ಲ. ಏ.8ರಂದು ಫಲಿತಾಂಶ ನೀಡಲಾಗುವುದೇ, ಇಲ್ಲವೇ ಎಂಬುದರ ಬಗ್ಗೆ, ಏ.7 ರಂದು ಸಂಜೆ ಮಾಹಿತಿ ನೀಡುತ್ತೇವೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಶಾಲಾ ಶಿಕ್ಷಣ ಸಚಿವರ ಕಚೇರಿಯ ಮೂಲಗಳ ಪ್ರಕಾರ ಉಪಚುನಾವಣೆಯ ಮತದಾನ (ಏ.9)ದ ನಂತರವದೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.



