ಹೊಸದಿಗಂತ ವರದಿ ಹಾವೇರಿ :
ನಗರಸಭೆಯ ಕೂಗಳತೆಯಲ್ಲಿರುವ ನಗರದ ಹೃದಯ ಭಾಗ, ಮಹಾತ್ಮಾ ಗಾಂಧಿ ವೃತ್ತದಲ್ಲಿನ ಗಾಂಧಿಜೀ ಮೂರ್ತಿ ಸೋಮವಾರ ಬೆಳ್ಳಂಬೆಳಗ್ಗೆ ಕಣ್ಮರೆಯಾಗಿದ್ದು, ವೃತ್ತ ಖಾಲಿ ಖಾಲಿ ಇದ್ದುದನ್ನು ಕಂಡು ಜನ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿ ಜನರು ಆತಂಕ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಭಾನುವಾರ ರಾತ್ರಿ ಸುಸ್ಥಿತಿಯಲ್ಲಿದ್ದ ಮಹಾತ್ಮಾ ಪ್ರತಿಮೆ ತಡರಾತ್ರಿ ಉರುಳಿ ಬಿದ್ದಿದೆ. ಮಳೆ, ಗಾಳಿಗೋ, ಅಥವಾ ಕಿಡಿಗೇಡಿಗಳ ಕೃತ್ಯವೋ ಮೂರ್ತಿ ಕೆಳಗುರುಳಿತ್ತು, ಈ ಮಾಹಿತಿ ಗಮನಕ್ಕೆ ಬರುತ್ತಿದ್ದಂತೆಯೇ ಶಹರಠಾಣೆ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೂರ್ತಿಯನ್ನು ಸಂರಕ್ಷಿಸಿದ್ದಾರೆ.
ಬಸವ ಜಯಂತಿ ದಿನವೇ ರಾಷ್ಟ್ರಪಿತನಿಗೆ ಅಪಮಾನವಾಗಿದೆ, ಮಹಾತ್ಮ ಗಾಂಧಿ ಪುತ್ಥಳಿ ನೆಲಕ್ಕುರುಳಿಸಿದ ಅಪರಿಚಿತ ದುಷ್ಕರ್ಮಿಗಳಿಂದ ಉದ್ದೇಶಪೂರ್ವಕ ಧ್ವಂಸ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಹತ್ವದ ಸುಳಿವುಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಕುರಿತು ಶಹರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.



