ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಗಂಭೀರ ಹಿಂಸಾಚಾರ ನಡೆದಿದೆ ಎನ್ನಲಾಗಿದೆ. ನಾಡಿಯಾ ಜಿಲ್ಲೆಯ ಛಪ್ರಾದಲ್ಲಿ ಬಿಜೆಪಿ ಏಜೆಂಟ್ ಮೇಲೆ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಾಹಿತಿಯ ಪ್ರಕಾರ, ಬಿಜೆಪಿ ಏಜೆಂಟ್ ಮೊಶರೆಫ್ ಮಿರ್ ಮೇಲೆ ಕೆಲವು ಮಂದಿ ದಾಳಿ ನಡೆಸಿದ್ದು, ಬಂದೂಕು ಮತ್ತು ಕಬ್ಬಿಣದ ರಾಡ್ ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿ ಸೈಕತ್ ಸರ್ಕಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ, ಮತ್ತೊಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೆವಾಲ್ ತಮ್ಮ ಏಜೆಂಟ್ನ್ನು ಮತಗಟ್ಟೆಯಿಂದ ಹೊರಹಾಕಿದ ಘಟನೆಗೆ ಸಂಬಂಧಿಸಿ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಮತಗಟ್ಟೆಗಳಲ್ಲಿ ಅಕ್ರಮ ಪ್ರವೇಶ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:
ಅದೇ ವೇಳೆ, ಹಲವೆಡೆ ಇವಿಎಂ ತಾಂತ್ರಿಕ ದೋಷಗಳಿಂದ ಮತದಾನ ಪ್ರಕ್ರಿಯೆ ವಿಳಂಬವಾಗಿದ್ದು, ಮತದಾರರು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಬಿಗಿ ಭದ್ರತೆಯ ನಡುವೆಯೂ ಕೆಲವು ಸ್ಥಳಗಳಲ್ಲಿ ಉದ್ವಿಗ್ನತೆ ಮುಂದುವರಿದಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ ಸಂಪೂರ್ಣವಾಗಿ ನಿರಾಕರಿಸಿದೆ. ಬಂಗಾಳದ ಅಂತಿಮ ಹಂತದ ಮತದಾನವು ಈಗ ರಾಜಕೀಯ ಆರೋಪ–ಪ್ರತ್ಯಾರೋಪಗಳ ನಡುವೆ ನಡೆಯುತ್ತಿದೆ.



