ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. ದಶಕಗಳಿಂದ ರಾಜ್ಯವನ್ನಾಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯಕ್ಕೆ ನಟ ವಿಜಯ್ ಸಾರಥ್ಯದ ತಮಿಳಗಾ ವೆಟ್ರಿ ಕಲಗಂ ಬ್ರೇಕ್ ಹಾಕಿದೆ. ಮೊದಲ ಚುನಾವಣೆಯಲ್ಲೇ ‘ದಳಪತಿ’ ತೋರಿದ ಈ ಸಂಚಲನವು ತಮಿಳು ರಾಜಕೀಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.
ಟಿವಿಕೆ ಪಕ್ಷದ ಅಭೂತಪೂರ್ವ ಯಶಸ್ಸಿನಿಂದ ಫುಲ್ ಖುಷ್ ಆಗಿರುವ ವಿಜಯ್ ತಂದೆ ಹಾಗೂ ಹಿರಿಯ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಮಾಧ್ಯಮಗಳ ಮುಂದೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ವಿಜಯ್ ಪರವಾಗಿ ಮಾತನಾಡಿದ ಅವರು, “ನನ್ನ ಮಗನ ಪಕ್ಷಕ್ಕೆ ಜನತೆ ಸ್ಪಷ್ಟ ಬಹುಮತ ನೀಡಿರುವುದು ಅತ್ಯಂತ ಸಂತೋಷದ ವಿಷಯ. ಇದು ಬದಲಾವಣೆಯ ಪರ್ವ,” ಎಂದಿದ್ದಾರೆ.
ಇದೇ ವೇಳೆ ರಾಜಕೀಯವಾಗಿ ಮಹತ್ವದ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿಯ ಆಫರ್ ನೀಡಿದ್ದಾರೆ. “ಟಿವಿಕೆ ಜೊತೆ ಕೈಜೋಡಿಸಿ ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್ ಮುಂದೆ ಬಂದರೆ ನಾವು ಸಿದ್ಧರಿದ್ದೇವೆ,” ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿಕೂಟದ ಸುಳಿವು ನೀಡಿದ್ದಾರೆ.



