ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಭವಾನಿಪುರ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ದೀರ್ಘ ಕಾಲದಿಂದ ಬಲಿಷ್ಠ ಕ್ಷೇತ್ರವೆಂದು ಪರಿಗಣಿಸಲ್ಪಟ್ಟ ಈ ಕ್ಷೇತ್ರದಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಚ್ಚರಿಯ ಸೋಲು ಕಂಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಮಮತಾ, ಹಂತ ಹಂತವಾಗಿ ಹಿನ್ನಡೆ ಅನುಭವಿಸಿದರು.
ಮತ ಎಣಿಕೆಯ 19ನೇ ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ 15 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟರು. ಅಂತಿಮ ಸುತ್ತಿನ ಮತ ಎಣಿಕೆ ಬಾಕಿ ಇರುವಾಗಲೇ ಬಿಜೆಪಿ ಶಿಬಿರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಈ ಫಲಿತಾಂಶವನ್ನು ಬಂಗಾಳ ರಾಜಕೀಯದ ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ. ರಾತ್ರಿ 9:30ರ ವೇಳೆಗೆ ಬಿಜೆಪಿ 176 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 32 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಹುಮತ ಪಡೆಯಲು 148 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.
ಇದನ್ನೂ ಓದಿ:
ಇನ್ನೊಂದೆಡೆ, ರಾಜ್ಯದ ಒಟ್ಟು ಚುನಾವಣಾ ಚಿತ್ರಣದಲ್ಲೂ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿದೆ. ಬಹುಮತಕ್ಕೆ ಅಗತ್ಯ ಸಂಖ್ಯೆಯನ್ನು ಮೀರಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ವೇದಿಕೆ ಸಜ್ಜಾಗಿದೆ. ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಈ ನಡುವೆ, ಸುವೇಂದು ಅಧಿಕಾರಿ ಹೆಸರು ಮುಖ್ಯಮಂತ್ರಿ ಪಟ್ಟದ ಪ್ರಮುಖ ಆಕಾಂಕ್ಷಿಯಾಗಿ ಕೇಳಿಬರುತ್ತಿದೆ. ಸಂಘಟನಾ ಸಾಮರ್ಥ್ಯ, ಜನಬೆಂಬಲ ಹಾಗೂ ಚುನಾವಣಾ ತಂತ್ರದಿಂದ ಗಮನ ಸೆಳೆದಿರುವ ಅವರು, ಬಂಗಾಳದಲ್ಲಿ ಬಿಜೆಪಿಯ ಹೊಸ ಮುಖವಾಗಿ ಹೊರಹೊಮ್ಮಿದ್ದಾರೆ.



