ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಮನೆಗಳ್ಳತನ ತಡೆಯಲು ಪೊಲೀಸ್ ಇಲಾಖೆ ಈಗ ಹೊಸ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ನೀವು ಫ್ಯಾಮಿಲಿ ಜೊತೆ ಟೂರ್ ಹೋಗ್ತಿದ್ದೀರಾ? ಹಾಗಾದ್ರೆ ಇನ್ಮುಂದೆ ಕಳ್ಳರ ಭಯ ಬೇಡ, ನಿಮ್ಮ ಮನೆಯ ನಿಗಾ ವಹಿಸಲಿದ್ದಾರೆ ನಮ್ಮ ಪೊಲೀಸರು ಊರಿಗೆ ಹೋಗಬೇಕಾದರೆ ಪೊಲೀಸರಿಗೆ ಮಾಹಿತಿ ನೀಡಿ ನಿಮ್ಮ ಮನೆಯನ್ನು ನಮ್ಮ ಪೊಲೀಸರು ಕಾವಲು ಮಾಡುತ್ತಾರೆಂದು ಎಸಪಿ ಕೆ. ರಾಮರಾಜನ್ ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಹೊಸ ಅಭಿಯಾನನ್ನು ಪ್ರಾರಂಭಿಸಿದ್ದಾರೆ. ಜನರು ಪ್ರವಾಸಕ್ಕೆ ಅಥವಾ ಶುಭ ಸಮಾರಂಭಗಳಿಗೆ ಮನೆಗೆ ಬೀಗ ಹಾಕಿ ತೆರಳುವಾಗ ಕಡ್ಡಾಯವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲೆಯ ಜನತೆಗೆಮನವಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿಗಳ ರಕ್ಷಣೆಗೆ ಪೊಲೀಸರೊಂದಿಗೆ ಕೈಜೋಡಿಸಬಹುದಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ‘ಕೆ.ಎಸ್.ಪಿ’ ಮೊಬೈಲ್ ಅಪ್ಲಿಕೇಷನ್ ಬಳಸಿ ಜನರು ತಮ್ಮ ಅನುಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದರೆ, ಆಯಾ ವ್ಯಾಪ್ತಿಯ ಬೀಟ್ ಪೊಲೀಸರು ನಿಮ್ಮ ಮನೆಗಳ ಮೇಲೆ ವಿಶೇಷ ನಿಗಾ ಇಡಲಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಪೊಲೀಸರ ನಿರಂತರ ಗಸ್ತಿನಿಂದ ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಕಳ್ಳತನ ನಡೆದ ಮೇಲೆ ದೂರು ನೀಡುವುದಕ್ಕಿಂತ, ಕಳ್ಳತನವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಎಸ್ಪಿ ಕೆ. ರಾಮರಾಜನ್ ಅವರು ತಿಳಿಸಿದ್ದಾರೆ.



