ಹೊಸದಿಗಂತ ವರದಿ ಉತ್ತರ ಕನ್ನಡ:
ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಸರ್ಚ್ ಮಾಡಿದ ಘಟನೆ ರವಿವಾರ ನಡೆದಿದೆ.
ಪಟ್ಟಣದ ಮೀಟರ ಬಡ್ಡಿ ಕಿಂಗ್ ಪಿನ್ ಜಮೀರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದರು. ಒಟ್ಟು ಈ ಪ್ರಕರಣದಲ್ಲಿ ಹನ್ನೊಂದು ಆರೋಪಿಗಳನ್ನು ಬಂಧಿಸಿದಂತಾಗಿದೆ.
ಕೊಲೆಗೆ ಕಂಟ್ರಿಮೇಡ್ ಪಿಸ್ತೂಲ್ ಬಳಸಲಾಗಿತ್ತು. ಅಲ್ಲದೆ ಈಗಾಗಲೇ 3 ಪಿಸ್ತೂಲ್ ಗಳನ್ನು, 6 ಸಜೀವ ಗುಂಡುಗಳನ್ನು ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿದ್ದರು. ಎರಡು ವರ್ಷದ ಹಿಂದೆಯೇ ಹತ್ಯೆಗೆ ಪ್ಲ್ಯಾನ್ ರಚಿಸಿದ್ದ ಹಂತಕರು, ಅದಕ್ಕಾಗೇ ಅವತ್ತೇ ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಲು ರೆಡಿಯಾಗಿದ್ದರು. ಹೀಗಾಗಿ, ಪ್ರಮುಖ ಆರೋಪಿ ಮಂಜು ಕಾಜಗಾರಗೆ ಅವತ್ತು ಶಿರಸಿ ಜೈಲಲ್ಲಿ ಪರಿಚಯವಾಗಿದ್ದ ದಿಲ್ ರಾಜ ನ ಮೂಲಕ ಉತ್ತರ ಪ್ರದೇಶಕ್ಕೆ ಹೋಗಿದ್ದರು.
ಎರಡು ವರ್ಷಗಳ ಹಿಂದೆಯೇ ದಿಲ್ ರಾಜ್ ಮಾರ್ಗದರ್ಶನದಲ್ಲೇ ಪಿಸ್ತೂಲು ಖರೀದಿಸಲು ಕೊಲೆ ಆರೋಪಿ ಮಂಜು ಕಾಜಗಾರ್ ಜೊತೆ ಉತ್ತರ ಪ್ರದೇಶದ ಗೋರಖಪುರಕ್ಕೆ ತೆರಳಿದ್ದ ಆರೋಪದ ಮೇಲೆ ಶನಿವಾರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ:
ತನಿಖೆ ವೇಳೆ ದಿಲ್ ರಾಜ್ ಹಾಗೂ ಮಂಜು ಕಾಜಗಾರ್ ಬಾಯಿಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿ ಕೂಲಂಕುಷವಾಗಿ ತನಿಖೆ ಕೈಗೊಳ್ಳಲಾಗಿತ್ತು. ಹೀಗಾಗಿ ರವಿವಾರ ಬೆಳ್ಳಂ ಬೆಳ್ಳಿಗೆ 7 ತಂಡಗಳಲ್ಲಿ ಪೊಲೀಸರು ಆರೋಪಿಗಳ ಮನೆಗಳಮೇಲೆ ದಾಳಿ ಮಾಡಿದ್ದಾರೆ. ಮಾರಕಾಸ್ತ್ರಗಳು ಸೇರಿದಂತೆ ಇನ್ನೂ ಏನಾದ್ರೂ ಕ್ರಿಮಿನಲ್ ಹಿನ್ನೆಲೆಯ ದಾಖಲೆಗಳು ಸಿಗಬಹುದಾ ಎಂದು ಸರ್ಚಿಂಗ್ ಮಾಡಿದ್ದಾರೆ.
ಇಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಕೊಲೆ ಆರೋಪಿಗಳ ಮನೆಯ ಮನೆ ದಾಳಿ ಮಾಡಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾಲಗಾಂವಿಯ ಮಂಜು ಕಾಜಗಾರ ಮನೆ, ಮುಂಡಗೋಡ ಕಿಲ್ಲೆ ಓಣಿಯ ಮಲ್ಲಿಕಜಹಾನ @ ಜಹೀರ ತಂದೆ ಶಬ್ಬೀರ ಶೇಖ್, ಮಹಮ್ಮದ ಸಾಧೀಕ ತಂದೆ ಅಬ್ದುಲ್ ರಜಾಕ ದರ್ಗಾವಾಲೆ ಮುಂಡಗೋಡ ಮಾರಿಕಾಂಬಾ ನಗರದ ಅಸಗರ ಅಲಿ ತಂದೆ ಮಕ್ತುಮ ಅಲಿ ದೊಡ್ಮನಿ, ಹಾಗೂ ಸಾಹೀಲ್ ತಂದೆ ಬಾಬಾಬುಡನ್ ಶೇಖ ನಂದಿಕಟ್ಟಿ ಸೇರಿದಂತೆ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸರ್ಚ್ ಮಾಡಿದ್ದಾರೆ. ಆದರೆ ಯಾವುದೆ ದಾಖಲೆಗಳಾಗಲಿ ಮಾರಕಾಸ್ತ್ರಗಳಾಗಲಿ ಪತ್ತೆಯಾಗಿಲ್ಲ ಎನ್ನಲಾಗಿದೆ.



