ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೇರಿಕಾ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಇಂಧನ ಉಳಿತಾಯ ಮಾಡುವಂತೆ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟಿರುವ ಮಹಾರಾಷ್ಟ್ರದ ನಾಯಕರು ಈಗ ವಿಶಿಷ್ಟ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ನಾಯಕರಾದ ದೇವೇಂದ್ರ ಫಡ್ನವೀಸ್ ಮತ್ತು ಸಚಿವ ಆಶಿಶ್ ಶೆಲಾರ್ ಅವರು ತಮ್ಮ ಐಷಾರಾಮಿ ಕಾರುಗಳನ್ನು ಬಿಟ್ಟು, ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ ಏರಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಇಂಧನ ಉಳಿತಾಯದ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇವರು ಹಮ್ಮಿಕೊಂಡ ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕೇವಲ ಸಾಂಕೇತಿಕವಾಗಿ ಬೈಕ್ ಸವಾರಿ ಮಾಡುವುದಷ್ಟೇ ಅಲ್ಲದೆ, ಫಡ್ನವೀಸ್ ಅವರು ಆಡಳಿತಾತ್ಮಕವಾಗಿಯೂ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಎಲ್ಲಾ ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿತಗೊಳಿಸುವಂತೆ ಅವರು ಆದೇಶಿಸಿದ್ದಾರೆ. ಮೇ 14 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಗ್ರ ಯೋಜನೆ ಮಂಡನೆಯಾಗಲಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ನೀಲನಕ್ಷೆ ಸಿದ್ಧಪಡಿಸುತ್ತಿದ್ದಾರೆ.
ಸರ್ಕಾರದ ಈ ಮಿತವ್ಯಯ ಕ್ರಮಗಳು ಕೇವಲ ಇಂಧನ ಉಳಿತಾಯ ಮಾತ್ರವಲ್ಲದೆ, ಬೊಕ್ಕಸಕ್ಕೆ ಆಗುವ ಹೊರೆಯನ್ನೂ ಕಡಿಮೆ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.



