ಹೊಸದಿಗಂತ ವರದಿ ಭಟ್ಕಳ:
ತಾಲೂಕಿನ ಶಿರಾಲಿಯ ತಟ್ಟಿಹಕ್ಲು ಸಮೀಪ ಹರಿಯುವ ವೆಂಕಟಾಪುರ ಹೊಳೆಯಲ್ಲಿ ಮಳವಿ (ಕಪ್ಪೆಚಿಪ್ಪು) ಸಂಗ್ರಹಿಸಲು ಹೋಗಿದ್ದ 14 ಜನರಲ್ಲಿ 11 ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿರುವ ಘಟನೆ ತೀವ್ರ ಆಘಾತ ತಂದಿರುವುದರ ಮಧ್ಯೆಯೇ ಈ ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದು ಎರಡು ಜೀವಗಳನ್ನು ಉಳಿಸಿದ ಯುವಕನೋರ್ವನ ಸಾಹಸಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಗಿರೀಶ್ ದಿನಕರ್ ಮೊಗೇರ್ ಎಂಬ ಯುವಕನೇ ರಿಯಲ್ ಹೀರೋ.ಈತನ ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಜನ ಕೊಂಡಾಡುತ್ತಿದ್ದಾರೆ. ತೆಂಗಿನಗುಂಡಿ-ಅಳ್ವೇಕೋಡಿ ನದಿಯಲ್ಲಿ ನಡೆದ ಆ ಭೀಕರ ದುರಂತದ ಸಮಯದಲ್ಲಿ, ದೂರದ ತನ್ನ ಮನೆಯಿಂದಲೇ ಪರಿಸ್ಥಿತಿಯನ್ನು ಗಮನಿಸಿದ ಗಿರೀಶ್, ಒಂದು ಕ್ಷಣವೂ ಯೋಚಿಸದೆ ಕಾರ್ಯಪ್ರವೃತ್ತರಾಗಿದ್ದಾರೆ.
ತಮ್ಮ ಜೀವದ ಹಂಗನ್ನು ತೊರೆದು, ಮಿಂಚಿನ ವೇಗದಲ್ಲಿ ದೋಣಿಯೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ ಅವರು ಇಬ್ಬರು ತಾಯಂದಿರ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಆರು ಜನರ ಶವಗಳನ್ನು ದಡಕ್ಕೆ ತಲುಪಿಸಲು ನೆರವಾಗಿದ್ದಾರೆ. ಭೀಕರ ದುರಂತದ ಮಧ್ಯೆಯೂ ಈ ಯುವಕ ಈಗ ರಿಯಲ್ ಹೀರೋ ಆಗಿದ್ದಾರೆ.



