ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸಿಎಂ-ಡಿಸಿಎಂ ಕುರ್ಚಿ ಚರ್ಚೆ ತೀವ್ರವಾಗಿರುವ ನಡುವೆಯೇ ಬಿಜೆಪಿ ನಾಯಕ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಸರ್ಕಾರದ ಯಂತ್ರವೇ ಈಗ ದೆಹಲಿಗೆ ಶಿಫ್ಟ್ ಆಗಿದೆ ಎಂದು ಟೀಕಿಸಿದ್ದಾರೆ.
‘ಜನರ ಸಮಸ್ಯೆ ಕೇಳೋ ಸರ್ಕಾರವೇ ಇಲ್ಲ’
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಮತ್ತು ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆಗಳೇ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸೇ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು.
‘ಕುರ್ಚಿ ಕದನದಲ್ಲೇ ನಾಯಕರು ಬ್ಯುಸಿ’
ಸಿಎಂ ಸ್ಥಾನ ಕುರಿತ ಚರ್ಚೆಯಿಂದ ಆಡಳಿತ ಸಂಪೂರ್ಣ ಹಿನ್ನಡೆ ಕಂಡಿದೆ ಎಂದು ರವಿ ಟೀಕಿಸಿದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರ ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿಬರುತ್ತಿರುವುದನ್ನೂ ಉಲ್ಲೇಖಿಸಿದರು.
ಇದನ್ನೂ ಓದಿ:
ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಆರೋಪ
ಭ್ರಷ್ಟಾಚಾರರಹಿತ ಆಡಳಿತದ ಭರವಸೆ ನೀಡಿದ್ದ ಸರ್ಕಾರ ಈಗ “60% ಸರ್ಕಾರ” ಆಗಿದೆ ಎಂದು ಅವರು ಕಿಡಿಕಾರಿದರು. ಪ್ರತಿಯೊಂದು ಇಲಾಖೆಯಲ್ಲೂ ಲಂಚದ ಆರೋಪ ಕೇಳಿಬರುತ್ತಿದೆ ಎಂದರು.
‘ಕುರ್ಚಿ ಕೊಟ್ಟ ಜನರೇ ಕೆಳಗಿಳಿಸ್ತಾರೆ’
ಆಂತರಿಕ ಅಧಿಕಾರ ಹೋರಾಟ ನಿಲ್ಲಿಸದಿದ್ದರೆ ಜನರೇ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ ಸಿಟಿ ರವಿ, ರಾಜ್ಯದಲ್ಲಿ ಆಡಳಿತಕ್ಕಿಂತ ರಾಜಕೀಯ ನಾಟಕವೇ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.



